ಜಮ್ಮಾ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಯಾವಾಗಲು ಚರ್ಚೆಗೆ ಸಿದ್ಧ, ಸವಾಲೆಸೆದವರು ವೇದಿಕೆ ಸಿದ್ದಪಡಿಸಲಿ;ಮಾಜಿ ಶಾಸಕ ಕೆ.ಜಿ ಬೋಪಯ್ಯ
ಮಡಿಕೇರಿ: ಜಮ್ಮಾ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಯಾವಾಗಲು ಚರ್ಚೆಗೆ ಸಿದ್ಧವಾಗಿದ್ದು, ಸವಾಲೆಸೆದವರು ವೇದಿಕೆ ಸಿದ್ದಪಡಿಸಲಿ ಎಂದು ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಜಮ್ಮಾ ಭೂಮಿ ಕುರಿತು ಬಿಜೆಪಿ ಆಡಳಿತದ ಅವಧಿಯಲ್ಲಿ ಪಕ್ಷತೀತವಾಗಿ ಹೋರಾಟ ಮಾಡಿಕೊಂಡು ಕೊಡಗಿನ ಜನತೆಗಾಗಿ ಶೇ.೯೦ರಷ್ಟು ಕೆಲಸ ಪೂರ್ಣಗೊಳಿಸಿತ್ತು. ಶೇ.೧೦ ರಷ್ಟು ಕೆಲಸವನ್ನು ಕಾಂಗ್ರೆಸಿಗರು ಮಾಡಿ, ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಜಮ್ಮಾಬಾಣೆ ವಿಚಾರ ಕುರಿತು ಚರ್ಚೆಗೆ ಬಿಜೆಪಿ ಸದಾ ಸಿದ್ದವಿದ್ದು, ಕಾಂಗ್ರೆಸಿಗರು ವೇದಿಕೆ ಸಿದ್ದಪಡಿಸಲಿ ಎಂದರು.
ಕಾಂಗ್ರೆಸ್ ಭೂಕಂದಾಯ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೊಡಗಿನ ಪಟ್ಟೆದಾರರಿಗೆ ಬ್ರಿಟಿಷ್ ಏಜೆಂಟರು ಎಂಬ ಹಣೆಪಟ್ಟಿ ಬರುವಂತೆ ಮಾಡಿದ್ದಾರೆ. ಅಲ್ಲದೇ, ಸಚಿವರಿಗೆ ಪಟ್ಟೆದಾರರ ಅರಿವು ಇರಲಿಲ್ಲ. ಆದರೆ, ಜಿಲ್ಲೆಯ ಶಾಸಕರಿಗೆ ಪಟ್ಟೆದಾರರ ಬಗ್ಗೆ ತಿಳಿದಿತ್ತು ಅಲ್ಲವೇ ಎಂದು ಪ್ರಶ್ನಿಸಿದ ಅವರು, ನಮ್ಮ ವಿರುದ್ಧ ಅಸವಿಂಧಾನಿಕ ಪದ ಬಳಕೆ ಮಾಡಿದರೆ ಬಿಜೆಪಿ ಅದರದ್ದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್ ಇದ್ದರು.