ನಾಪೋಕ್ಲುವಿನಲ್ಲಿ ಶಾದಿ ಮಹಲ್ ಗೆ ಬಿಜೆಪಿ ವಿರೋಧ : ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

ನಾಪೋಕ್ಲುವಿನಲ್ಲಿ ಶಾದಿ ಮಹಲ್ ಗೆ ಬಿಜೆಪಿ ವಿರೋಧ : ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

ಮಡಿಕೇರಿ ಜ.28 : ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿಯ ಬೇತು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾದಿ ಮಹಲ್ ನ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.

 ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಪ್ರಮುಖರು ಶಾಲೆಗೆ ಸೇರಿದ ಜಾಗಗಳ ಹದ್ದುಬಸ್ತು ಗುರುತಿಸಬೇಕೆಂದು ಒತ್ತಾಯಿಸಿದರು.

ನಾಪೋಕ್ಲುವಿನಲ್ಲಿ ಬಹಳ ವರ್ಷಗಳ ಹಿಂದೆ ಸ್ಥಳೀಯ ದಾನಿಗಳು ಹಾಗೂ ಸರಕಾರದಿಂದ ಮಂಜೂರಾದ ಒಟ್ಟು ೪೭.೫೨ ಏಕರೆ ಜಾಗವಿತ್ತು. ಇದರಲ್ಲಿ ಸುಮಾರು ಹತ್ತು ಏಕರೆ ಜಾಗವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಗೆ ಮತ್ತು ೭.೫೨ ಏಕರೆಯನ್ನು ಅಂಬೇಡ್ಕರ್ ವಸತಿ ಶಾಲೆಗೆ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗದಿಂದ ವಿಂಗಡಿಸಿ ನೀಡಲಾಗಿದೆ ಇತ್ತೀಚೆಗೆ ಶಾದಿಮಹಲ್ ನಿರ್ಮಿಸಲು ಭೂಮಿಪೂಜೆ ನೆರವೇಸರಿಸಲಾಗಿದ್ದು, ಕಾಮಗಾರಿ ನಡೆಯುತ್ತಿದೆ.

 ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರಾಂಶುಪಾಲರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ, ಶಾಸಕರಿಗೆ ಕಳೆದ ಮೂರು ತಿಂಗಳಿನಿಂದ ಪತ್ರವನ್ನು ಬರೆದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆತ್ತಿಲ್ಲ, ಶಾದಿ ಮಹಲ್ ಕಾಮಗಾರಿ ಮುಂದುವರೆದಿದೆ. ಈ ಹಿಂದೆಯೂ ಶಾಲೆಯ ಜಾಗ ಅತಿಕ್ರಮಣ ಮಾಡಿದವರನ್ನು ಖಾಲಿ ಮಾಡಿಸಲು ಪತ್ರ ಬರೆದಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಪ್ರಮುಖರು ಆರೋಪಿಸಿದರು.

ಸ್ಥಳ ಪರಿಶೀಲನೆ ನಡೆಸಿ ಶಾದಿಮಹಲ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಶಾಲೆ, ಕಾಲೇಜ್, ಡಾ.ಅಂಬೇಡ್ಕರ್ ವಸತಿ ಶಾಲೆಗೆ ಸೇರಿದ ಜಾಗಗಳ ಹದ್ದುಬಸ್ತು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಮನು ಮುತ್ತಪ್ಪ, ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ಪ್ರಮುಖರಾದ ಕರವಂಡ ಲವ ನಾಣಯ್ಯ, ಬಿದ್ದಾಟಂಡ ಸಂಪತ್, ಅಂಬಿ ಕಾರ್ಯಪ್ಪ, ಮನು ಮಹೇಶ್, ಕಾಂಗೀರ ಸತೀಶ್, ಜಾಲಿ ಪೂವಪ್ಪ, ಅಜಿತ್ ನಾಣಯ್ಯ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಇದ್ದರು.