ಅಪಪ್ರಚಾರವೇ ಬಿಜೆಪಿ ಅಜೆಂಡಾ: ಕೊಡಗು ಕಾಂಗ್ರೆಸ್ ಆರೋಪ
ಮಡಿಕೇರಿ:ರಾಜ್ಯ ಸರ್ಕಾರದ ವಿರುದ್ದ ಅಪಪ್ರಚಾರ ಮಾಡುವುದೇ ಬಿಜೆಪಿ ಗರ ಅಜೆಂಡಾ ವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾದ್ಯಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ನಿರಂತರವಾಗಿ ಅಭಿವೃದ್ದಿ ಕಾರ್ಯವನ್ನು ಮಾಡುತ್ತಿರುವುದು ಬಹಿರಂಗವಾಗಿ ಕಾಣಿಸುತ್ತಿದೆ.ಎರಡೂವರೆ ವರ್ಷದ ಅಲ್ಪ ಕಾಲದಲ್ಲಿ 3800 ಕೋಟಿಗೂ ಅಧಿಕ ಅನುದಾನವನ್ನು ತಂದು ವಿಶೇಷ ಯೋಜನೆಗಳು ಜಿಲ್ಲೆಯಲ್ಲಿ ಲೋಕಾರ್ಪಣೆ ಆಗುತ್ತಿದೆ.ಪಂಚ ಗ್ಯಾರೆಂಟಿ ಗಳಿಂದ ಅಭಿವೃದ್ಧಿ ಅಸಾಧ್ಯ ಎಂದು ಕೊಡಗು ಬಿಜೆಪಿ ಮುಖಂಡರು ಜನರಲ್ಲಿ ಅಪಪ್ರಚಾರ ಮಾಡಿದ್ದರು.
ಈಗ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಶಾಸಕದ್ವಯರು ಅದಕ್ಕೆ ಉತ್ತರ ನೀಡಿದ್ದಾರೆ.ಪರಿಸ್ಥಿತಿ ಹೀಗಿದ್ದರೂ ಕೊಡಗು ಬಿಜೆಪಿ ನೀತಿಗೆಟ್ಟ ರಾಜಕಾರಣಕ್ಕಾಗಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಪ್ರತಿಭಟನೆ ಮಾಡಲು ಹೊರಟಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಹರಸಾಹಸ ಪಡುತ್ತಿದ್ದು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಹೇಗೆ ಬಿಡುಗಡೆಯಾಗಿದೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಖಾಲಿ ಖಜಾನೆಯಾಗಿರುವ ರಾಜ್ಯ ಸರ್ಕಾರ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ನೀಡಿದೆ. ಹಾಗಾದರೆ ತುಂಬಿ ತುಳುಕುತ್ತಿರುವ ಕೇಂದ್ರ ಸರ್ಕಾರದ ಖಜಾನೆಯಿಂದ ಜಿಲ್ಲೆಗೆ ಬಂದ ಅನುದಾನ ಎಷ್ಟು ಎಂದು ಜನತೆಯ ಮುಂದೆ ಬಿಜೆಪಿ ಗರು ಸ್ಪಷ್ಟ ಪಡಿಸಲಿ ಎಂದು ತೆನ್ನಿರ ಮೈನಾ ಒತ್ತಾಯಿಸಿದ್ದಾರೆ. 2024-25 ನೇ ಸಾಲಿನಲ್ಲಿ ಸಂಸದರು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು ಹದಿಮೂರು ಕಾಮಗಾರಿಗಳಿಗೆ ಒಟ್ಟು 65 ಲಕ್ಷ ರೂಗಳನ್ನು ಒದಗಿಸಿದರೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಹದಿನಾರು ಕಾಮಗಾರಿಗಳಿಗೆ ಒಟ್ಟು 68 ಲಕ್ಷದ 50 ಸಾವಿರ ರೂಗಳ ಅನುದಾನ ನೀಡಿರುವುದು ಅಧಿಕೃತವಾಗಿದ್ದು ಇದರ ಬಗ್ಗೆ ಜನರಿಗೆ ತಿಳಿಸುವ ಕೆಲಸ ಕೊಡಗು ಬಿಜೆಪಿ ಯಿಂದ ಆಗಲಿ ಎಂದು ತೆನ್ನಿರ ಮೈನಾ ಸಲಹೆ ನೀಡಿದ್ದಾರೆ.