ಬಾದಾಮಿ | ಪತಿಯ ಕಿರುಕುಳಕ್ಕೆ ಬೇಸತ್ತು 3 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಬಾಗಲಕೋಟೆ, ಅ. 22: ಪತಿ ನೀಡುತ್ತಿದ್ದ ನಿರಂತರ ಕಿರುಕುಳದಿಂದ ಬೇಸತ್ತು ತಾಯಿ ತನ್ನ ಮೂರು ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.
ಮೃತರನ್ನು ಫಾತಿಮಾ (21) ಮತ್ತು ಆಕೆಯ ಪುತ್ರ ಅಬ್ದುಲ್ (3) ಎಂದು ಗುರುತಿಸಲಾಗಿದೆ. ಪತಿ ಮಸ್ತಾನ್ ಸಾಬ್ ನೀಡುತ್ತಿದ್ದ ಕಿರುಕುಳವೇ ಮಗಳ ಸಾವಿಗೆ ಪ್ರಮುಖ ಕಾರಣವೆಂದು ಫಾತಿಮಾ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಮಸ್ತಾನ್ ಸಾಬ್ ಎಂಟು ವರ್ಷಗಳ ಹಿಂದೆ ಜಮೀಲಾ ಎಂಬ ಯುವತಿಯೊಂದಿಗೆ ಮೊದಲ ವಿವಾಹ ಮಾಡಿಕೊಂಡಿದ್ದನು. ಬಳಿಕ ಐದು ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಪ್ರೀತಿಸಿ ಗ್ರಾಮಸ್ಥರ ಸಮ್ಮುಖದಲ್ಲೇ ಮದುವೆಯಾಗಿದ್ದ. ಆದರೆ ಮದುವೆಯ ಬಳಿಕ ಕೆಲ ತಿಂಗಳೊಳಗೆ ಪತಿ ಫಾತಿಮಾಳಿಗೆ ನಿರಂತರ ಕಿರುಕುಳ ನೀಡುತ್ತಿದ್ದನೆಂಬ ಆರೋಪ ಪೋಷಕರಿಂದ ಕೇಳಿಬಂದಿದೆ.
ಕಿರುಕುಳದಿಂದ ಬೇಸತ್ತು ಫಾತಿಮಾ ಮೂರು ದಿನಗಳ ಹಿಂದೆ ತವರಿಗೆ ಬಂದಿದ್ದರು. ಬಳಿಕ ತನ್ನ ಮೂರು ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.