ಬೆಂಗಳೂರು: ಪತಿಗೆ ಅನೈತಿಕ ಸಂಬಂಧ; ಇಬ್ಬರು ಮಕ್ಕಳನ್ನು ಕೊಂದು ಪತ್ನಿ ಆತ್ಮಹತ್ಯೆ

ಬೆಂಗಳೂರು: ಪತಿಗೆ ಅನೈತಿಕ ಸಂಬಂಧ; ಇಬ್ಬರು ಮಕ್ಕಳನ್ನು ಕೊಂದು ಪತ್ನಿ ಆತ್ಮಹತ್ಯೆ

ಬೆಂಗಳೂರು, ಅ. 10: ಬೆಂಗಳೂರಿನ ಭುವನೇಶ್ವರಿ ನಗರದಲ್ಲಿ ಭೀಕರ ಘಟನೆ ನಡೆದಿದ್ದು, ರಾಯಚೂರಿನ ಮಸ್ಕಿಯವರಾದ ವಿಜಯಲಕ್ಷ್ಮೀ ತಮ್ಮ ಮಕ್ಕಳಾದ 4 ವರ್ಷದ ಬೃಂದ ಮತ್ತು 1.5 ವರ್ಷದ ಭುವನ್ ಅವರನ್ನು ಕೊಂದು, ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಸ್ಕಿಯವರಾದ ವಿಜಯಲಕ್ಷ್ಮೀ ಮತ್ತು ರಮೇಶ್ ದಂಪತಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಪತಿ ರಮೇಶ್ ಇತ್ತೀಚೆಗೆ ಮತ್ತೊಬ್ಬಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾರೆ ಎನ್ನಲಾಗಿದೆ. ಇದರಿಂದ ದಂಪತಿಯ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ವಿಜಯಲಕ್ಷ್ಮೀ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು.

ಘಟನೆಯ ದಿನ, ರಮೇಶ್ ಮನೆಯಲ್ಲಿ ಇಲ್ಲದ ಸಮಯದಲ್ಲಿ, ವಿಜಯಲಕ್ಷ್ಮೀ ಇಬ್ಬರು ಮಕ್ಕಳನ್ನು ನೇಣಿಗೆ ಬಿಗಿದು, ತಾನೂ ಫ್ಯಾನಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

 ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪತಿ ರಮೇಶ್ ಅವರನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.