ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಹಾರಾಜ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮ ದಿನಾಚರಣೆ
ಮಡಿಕೇರಿ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಮೈಸೂರಿನ ಮಹಾರಾಜ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಡಿಕೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಚರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಅವರು ಮರೆಯಲು ಅಸಾಧ್ಯವಾದಂತಹ ದಿವ್ಯ ಚೇತನ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು. ಅವರು ಕನ್ನಡ ನಾಡಿಗೆ ಮಾಡಿದ ಸೇವೆಯನ್ನು ಎಷ್ಟು ವರ್ಣಿಸಿದರೂ ಸಾಲದು. ಇಂದು ಶತಮಾನೋತ್ಸವ ಆಚರಿಸುತ್ತಿರುವ ಎಲ್ಲ ಸಂಘ-ಸಂಸ್ಥೆಗಳನ್ನು ಪ್ರಾರಂಭಿಸಿದ್ದು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು.
ಮೊದಲ ಸಭೆಯಲ್ಲಿ ಅವರು ಮಾತನಾಡುತ್ತಾ, "ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡ ಸುಖ ಸಂಪತ್ತನ್ನು ಒದಗಿಸಿ ಕೊಡಬೇಕೆಂಬುದು ನನ್ನ ಜೀವನದ ಪರಮೊದ್ದೇಶ" ಎಂದರು. ಅದಕ್ಕಾಗಿ ೧೯೨೩ರಲ್ಲಿ ಹೊಸ, ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಮಾರ್ಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಮಾತ್ರ ಇವರು ಸ್ಥಾಪಿಸಲಿಲ್ಲ. ಇತ್ತೀಚಿಗೆ ಶತಮಾನೋತ್ಸವ ಆಚರಿಸಿದ ರಾಜ್ಯಮಟ್ಟದ ಎಲ್ಲ ಸಂಸ್ಥೆಗಳ ಸ್ಥಾಪಕರು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಅಪೆಕ್ಸ್ ಬ್ಯಾಂಕ್, ಲ್ಯಾಂಡ್ ಬ್ಯಾಂಕ್, ಮೈಸೂರು ರಾಜ್ಯ ಕೈಗಾರಿಕಾ ಬ್ಯಾಂಕ್, ವಿಶ್ವವಿದ್ಯಾಲಯ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ವಾಣಿವಿಲಾಸ ಸಾಗರದ ಆಣೆಕಟ್ಟು, ಭಾರತದ ಮೊದಲ ಬೃಹತ್ ಅಣೆಕಟ್ಟು ಕೃಷ್ಣರಾಜಸಾಗರ ಅಣೆಕಟ್ಟು, ಶಿವನಸಮುದ್ರದಲ್ಲಿ ಭಾರತದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ, ಮೈಸೂರು ಸ್ಯಾಂಡಲ್ ವುಡ್ ಫ್ಯಾಕ್ಟರಿ, ಮೈಸೂರು ಬಲ್ಬ್ ಫ್ಯಾಕ್ಟರಿ, ಮೈಸೂರು ಸೋಪ್ಸ್ ಅಂಡ್ ಟಿಟರ್ಜಿಡೆಂಟ್ಸ್, ಬೆಂಗಳೂರಿನ ವಾಣಿಜ್ಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮೈಸೂರಿನ ತಾಂತ್ರಿಕ ಕಾಲೇಜು, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಮಂಗಳೂರಿನಲ್ಲಿ ಹಂಚಿನ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ,
ಮೈಸೂರ್ ಪೇಂಟ್ಸ್ ಫ್ಯಾಕ್ಟರಿ, ಭದ್ರಾವತಿಯ ಉಕ್ಕು ಕಾರ್ಖಾನೆ, ಪೇಪರ್ ಕಾರ್ಖಾನೆ, ಬೆಂಗಳೂರಿನ ಮಿಂಟೋ ಆಸ್ಪತ್ರೆ , ಮೈಸೂರಿನ ಕ್ಷಯಾ ಆಸ್ಪತ್ರೆ, ರಾಜ್ಯ ವ್ಯಾಪ್ತಿ 250ಕ್ಕೂ ಹೆಚ್ಚು ಆಸ್ಪತ್ರೆಗಳು, ಕೊಡಗಿನಲ್ಲಿ ಕಾಫಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಿದರು.
ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂಆಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.
ದೇಶದಲ್ಲಿ ಆಗಿ ಹೋದ ಎಲ್ಲಾ ರಾಜರುಗಳಿಗೆ ಜನಸೇವೆಯಲ್ಲಿ ಅಗ್ರಗಣ್ಯರಾಗಿ ನಿಲ್ಲುವವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಎಂದರು ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಸಂಘಟನಾ ಕಾರ್ಯದರ್ಶಿ ವಾಸು ರೈ, ಕುಶಾಲನಗರ ತಾಲೂಕು ಗೌರವಕೋಶಾಧಿಕಾರಿ ಕೆ.ವಿ ಉಮೇಶ್, ಸದಸ್ಯರುಗಳಾದ ಭಾರತಿ ರಮೇಶ್, ರೇಣುಕಾ, ಅಜಯ್ ಉಪಸ್ಥಿತರಿದ್ದರು.

