ಮದುವೆಯ 'ಫಸ್ಟ್ ನೈಟ್'ಗೆ ಅಡ್ಡ ನೆಪ ಹೇಳಿದ್ದ ವಧು ಚಿನ್ನದೊಂದಿಗೆ ಪರಾರಿ!
ಕಿಶನ್ಗಢ (ರಾಜಸ್ಥಾನ): ರಾಜಸ್ಥಾನದ ಕಿಶನ್ಗಢದಲ್ಲಿ ಮದುವೆಯಾದ ಮೊದಲರಾತ್ರಿಯೇ ವಧು ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಮದುವೆಯ ಮಾಡಿಸಿದಾತನೂ ನಾಪತ್ತೆಯಾಗಿರುವುದು ವರದಿಯಾಗಿದೆ.
ವರನ ಕುಟುಂಬ ನೀಡಿದ ಮಾಹಿತಿಯ ಪ್ರಕಾರ, ಆಗ್ರಾದ ಮೂಲದ ವಧುವಿನೊಂದಿಗೆ ನಡೆದ ಮದುವೆಯನ್ನು ಜಿತೇಂದ್ರ ಎಂಬಾತನ ಮೂಲಕ ನಿಶ್ಚಯಿಸಲಾಗಿತ್ತು. ಈ ವೇಳೆ ದಲ್ಲಾಳಿ 2 ಲಕ್ಷ ರೂ. ಶುಲ್ಕ ಪಡೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಜೈಪುರದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಮದುವೆ ನೆರವೇರಿದ್ದು, ವರನ ತಾಯಿ ಸೊಸೆಗೆ ಚಿನ್ನಾಭರಣವನ್ನೂ ಉಡುಗೊರೆಯಾಗಿ ನೀಡಿದ್ದರು.
ಆದರೆ ಮದುವೆಯ ಮೊದಲರಾತ್ರಿ ವರನೊಂದಿಗೆ ಪ್ರಸ್ತಕ್ಕೆ ವಧು ನಿರಾಕರಿಸಿ, “ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ” ಎಂದು ಪ್ರತ್ಯೇಕವಾಗಿ ಮಲಗಿದ್ದಳು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ವರ ಎದ್ದಾಗ, ವಧು ಕಾಣೆಯಾಗಿರುವುದು ಕಂಡು ಬಂತು. ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದೂ ನಾಪತ್ತೆಯಾಗಿದೆ.
ಸಮೀಪದ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಹುಡುಕಾಟ ನಡೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ವರನ ಸಂಬಂಧಿ ರಾಕೇಶ್ ಮದನ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ವಧು ಹಾಗೂ ದಲ್ಲಾಳಿ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.