ಬಿರುನಾಣಿಯಲ್ಲಿ ಹಿಂದೂ ಸಂಗಮದ ಪ್ಲೆಕ್ಸ್, ಬಂಟಿಂಗ್ಸ್ಗೆ ಹಾನಿ; ಇಬ್ಬರ ವಿರುದ್ಧ ಪ್ರಕರಣ ಪ್ರಕರಣ ದಾಖಲು
ಮಡಿಕೇರಿ, ಫೆ. 21:ಬಿರುನಾಣಿಯಲ್ಲಿ ತಾ. 23ರ ಸೋಮವಾರದಂದು ಹಿಂದೂ ಸಂಗಮಕ್ಕೆ ಸಿದ್ಧತೆ ನಡೆದಿತ್ತು. ಆದರೆ, ಕೆಲವು ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯ ಈ ವಿಭಾಗದಲ್ಲಿ ಒಂದಷ್ಟು ಪ್ರಕ್ಷುಬ್ಧತೆ ಉಂಟುಮಾಡಿದೆ.
ಹಿಂದೂ ಸಂಗಮಕ್ಕೆ ಸಿದ್ಧತೆಯಾಗಿ ಬಿರುನಾಣಿ ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿನ ಕೊಡವ ಸಮಾಜದ ತನಕ ಬಂಟಿಂಗ್ಸ್ ಹಾಗೂ ಪ್ಲೆಕ್ಸ್ಗಳನ್ನು ಆಯೋಜಕ ಸಮಿತಿ ಪ್ರಮುಖರು ಅಳವಡಿಸಿದ್ದರು.
ಶುಕ್ರವಾರ ತಡರಾತ್ರಿ 12 ಗಂಟೆ ಸುಮಾರಿಗೆ ವಾಹನದಲ್ಲಿ ಆಗಮಿಸಿದ್ದ ಇಬ್ಬರು ಇದನ್ನು ತೆರವು ಮಾಡಿ ಅಪಹರಿಸಿದ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಹಿಂದೂ ಬೆಂಬಲಿಗರು ಜಮಾಯಿಸಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿರುನಾಣಿ ಪಟ್ಟಣದಲ್ಲಿನ ಸಿಸಿಟಿವಿ ದೃಶ್ಯದಂತೆ ಇಬ್ಬರು ಈ ಕೃತ್ಯ ನಡೆಸಿರುವುದು ಬಯಲಾಗಿದೆ.
ಇದರಂತೆ ಆಯೋಜಕ ಸಮಿತಿ ಮೂಲಕ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಂಚಾಲಕ ಅಣ್ಣಳಮಾಡ ರಾಯ್ ಚಿಣ್ಣಪ್ಪ ಅವರು ನೀಡಿರುವ ದೂರಿನಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರೀತಂ ಹಾಗೂ ಕುಪ್ಪಣಮಾಡ ರಾಬಿನ್ ಎಂಬಿಬ್ಬರು ಈ ಕೃತ್ಯವೆಸಗಿರುವ ಬಗ್ಗೆ ಪುಕಾರಾಗಿದ್ದು, ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನಕ್ಕೆ ಆಯೋಜಕ ಸಮಿತಿ ಒತ್ತಾಯಿಸಿದೆ.
ಹಲವಾರು ಮಂದಿ ಖಂಡಿಸಿದ್ದು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಸಾಮರಸ್ಯದಿಂದ ಕಾರ್ಯಕ್ರಮ ಜರುಗುತ್ತಿರುವ ವೇಳೆ ಗ್ರಾಮ ವ್ಯಾಪ್ತಿಯಲ್ಲಿ ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಳೀಯರು ಆಗಿರುವ ನೆಲ್ಲೀರ ಚಲನ್ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರೀಮಂಗಲ ಪೊಲೀಸರು ತನಿಖೆಯೊಂದಿಗೆ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ. ಶನಿವಾರ ಸಂಜೆಯ ಬಳಿಕ ಆಯೋಜಕ ಸಮಿತಿಯವರು ಬಿರುನಾಣಿ ಪಟ್ಟಣದಿಂದ ಕೊಡವ ಸಮಾಜದ ತನಕ ಬಂಟಿಂಗ್ಸ್, ಪ್ಲೆಕ್ಸ್ ಗಳ ಮೂಲಕ ಸಿದ್ಧತೆ ಇದೀಗ ಈ ಘಟನೆ ಈ ವಿಭಾಗದಲ್ಲಿ ತೀವ್ರ ಚರ್ಚೆಗೆ ಎಡೆಯಾಗಿದೆ. ಸ್ಥಳಕ್ಕೆ ಶ್ರೀಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.