ಹೆಮ್ಮೆತ್ತಾಳಿನಲ್ಲಿ ಚಾಮುಂಡೇಶ್ವರಿ ದೇವಿ ಅಷ್ಟಬಂಧ ಬ್ರಹ್ಮ ಕಲಶ ಮುಹೂರ್ತ
ಮಡಿಕೇರಿ,ಫೆ.೨೫; ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮಕಲಶ ಮುಹೂರ್ತ ಹಾಗೂ ನಾಗದೇವರು, ಗುಳಿಗ ದೈವದ ಪ್ರತಿಷ್ಠಾಪನಾ ಕಾರ್ಯ ಶ್ರದ್ಧಾ-ಭಕ್ತಿಯೊಂದಿಗೆ ಅದ್ದೂರಿಯಾಗಿ ನೆರವೇರಿತು.
ಕಳೆದ ತಾ.೨೦ರ ರಾತ್ರಿಯಿಂದ ೨೨ರ ಸಂಜೆವರೆಗೆ ಮೂರು ದಿನಗಳ ಕಾಲ ವಿವಿಧ ದೈವಿಕ ಕೈಂಕರ್ಯಗಳು ನೆರವೇರಿದವು. ಆದ್ಯ ಗಣಪತಿ ಹೋಮ, ನವಗ್ರಹ ಹೋಮ, ಶಿಖರ ಪೂಜೆ ಮತ್ತು ಪ್ರತಿಷ್ಠೆ, ಸಪ್ತ ಶುದ್ಧಿ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಹೋಮ, ಅಧಿವಾಸ ಹೋಮ, ಸುದರ್ಶನ ಹೋಮ, ರಾಕ್ಷೆಘ್ನ ಹೋಮ, ಚಾಮುಂಡೇಶ್ವರಿ ಹೋಮ, ವಾಸ್ತು ಹೋಮ, ಪ್ರಕಾರ ಬಲಿ, ಬ್ರಹ್ಮ ಕಲಶಾಧಿವಾಸ, ಚಾಮುಂಡೇಶ್ವರಿ ದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ನಿದ್ರಾ ಕುಂಬಾಭೀಷೇಕ, ದುರ್ಗಾ ಹೋಮ, ನಾಗ ಪ್ರತಿಷ್ಠ, ಗುಳಿಗ ದೈವ ಪ್ರತಿಷ್ಠೆಯೊಂದಿಗೆ ಬ್ರಹ್ಮ ಕಲಶಾಭಿಷೇಕ ನೆರವೇರಿತು.
ಪೂಜಾ ಕಾರ್ಯದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಎಡಪದವು ನಿತೀಶ ತಂತ್ರಿಗಳ ನೇತೃತ್ವದಲ್ಲಿ ದೈವಿಕ ಕೈಂಕರ್ಯಗಳು ನೆರವೇರಿದವು. ಗ್ರಾಮ ಹಾಗೂ ನೆರೆಯ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ಭಕ್ತರಿಗೆ ಉಪಹಾರ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.