ಚೆಕ್ ಬೌನ್ಸ್ ಪ್ರಕರಣ: ಆರೋಪಿ ನಾಯಕಂಡ ಬೋಪಣ್ಣ ದೋಷ ಮುಕ್ತ

ಚೆಕ್ ಬೌನ್ಸ್ ಪ್ರಕರಣ: ಆರೋಪಿ ನಾಯಕಂಡ ಬೋಪಣ್ಣ ದೋಷ ಮುಕ್ತ

ವಿರಾಜಪೇಟೆ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ನಾಯಕಂಡ ಬೋಪಣ್ಣ ಅವರನ್ನು ವಿರಾಜಪೇಟೆ ನ್ಯಾಯಾಲಯ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ. ವಿರಾಜಪೇಟೆ ನಿವಾಸಿ ಬ್ರಿಜ್ ವೈನ್ಸ್ ಅಂಗಡಿಯ ಮ್ಯಾನೇಜರ್ ಟಿ.ಆರ್. ದಿನೇಶ್ ಎಂಬುವವರು ಜನವರಿ 2019ರಲ್ಲಿ ರೂ. 5 ಲಕ್ಷ ಹಣವನ್ನು ಸಾಲವಾಗಿ ಆರ್ಜಿ ಗ್ರಾಮದ ನಾಯಕಂಡ ಬೋಪಣ್ಣ ಅವರಿಗೆ ನೀಡಿದ ಬಗ್ಗೆ ಬೋಪಣ್ಣ ಅವರ ವಿರುದ್ಧ ವಿರಾಜಪೇಟೆ ನ್ಯಾಯಾಲಯದಲ್ಲಿ ಹಣದ ವಸೂಲಾತಿಗಾಗಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದು ಕೇಸನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯ ದೂರುದಾರ ದಿನೇಶ್ ಅವರು ದಾಖಲಿಸಿದ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದೆ.

5 ಲಕ್ಷ ಹಣಕ್ಕೆ ಬೋಪಣ್ಣನವರು ವಿರಾಜಪೇಟೆ ಕಾರ್ಪೊರೇಷನ್ ಬ್ಯಾಂಕಿನ ಚೆಕ್ ಅನ್ನು ನೀಡಿದ್ದು ಚೆಕ್ ಅನ್ನು ಬ್ಯಾಂಕಿಗೆ ನಗದೀಕರಣಗೊಳಿಸಲು ಸಲ್ಲಿಸಿದಾಗ ಆತನ ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕಿನ ದಾಖಲಾತಿಯೊಂದಿಗೆ ದಿನೇಶ್ ಅವರು ಹಣದ ವಸೂಲಾತಿಗಾಗಿ ಚೆಕ್ ಬೌನ್ಸ್ ಕೇಸ್ ಬೋಪಣ್ಣ ಅವರ ವಿರುದ್ಧ ದಾಖಲಿಸಿದ್ದರು.

 ಪ್ರಕರಣವನ್ನು ವಿಚಾರಣೆ ನಡೆಸಿದ ವಿರಾಜಪೇಟೆಯ ಪ್ರಿನ್ಸಿಪಲ್ ನ್ಯಾಯಾಧೀಶರಾದ ಪ್ರದೀಪ್ ಪೋತೆದಾರ್ ಪಿರ್ಯಾದಿ ಟಿ.ಆರ್. ದಿನೇಶ್ ಅವರು ಸೂಕ್ತ ಸಾಕ್ಷಾಧಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ತೀರ್ಪನ್ನು ಪ್ರಕಟಿಸಿ ಆರೋಪಿ ಬೋಪಣ್ಣನವರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಿ ಆದೇಶ ಪ್ರಕಟಿಸಿದ್ದಾರೆ. ಆರೋಪಿ ನಾಯಕಂಡ ಬೋಪಣ್ಣ ಅವರ ಪರವಾಗಿ ವಿರಾಜಪೇಟೆಯ ವಕೀಲರಾದ ಡಿ.ಸಿ. ಧ್ರುವ ಕುಮಾರ್ ವಾದಿಸಿದರು.