ಚೇರಂಬಾಣೆ; ಏ.08 ರಿಂದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪುನರ್ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ
ಮಡಿಕೇರಿ: ಚೇರಂಬಾಣೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪುನರ್ ಪ್ರತಿಷ್ಠಾ ಮತ್ತು ಬ್ರಹ್ಮ ಕಲಶೋತ್ಸವ ಏ.೮ ರಿಂದ ೧೦ ರವರೆಗೆ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಿ.ಡಿ.ಪೊನ್ನಪ್ಪ ತಿಳಿಸಿದ್ದಾರೆ.
ಚೇರಂಬಾಣೆಯಲ್ಲಿನ ಪಟ್ಟಿಮಾಡ ಕುಟುಂಬದ ಬೇಂಗೂರು ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪುನರ್ ನಿರ್ಮಾಣವಾದ ನೂತನ ಪ್ರಾಸಾದದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪಂಚಲೋಹ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕವು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪಟ್ಟಿಮಾಡ ಕುಟುಂಬದ ಯಜಮಾನತ್ಯದಲ್ಲಿ ಆಯೋಜಿತವಾಗಿದೆ.
ಏ.೮ ರಂದು ಬುಧವಾರ ಸಂಜೆ ೭ ಗಂಟೆಗೆ ಪ್ರಾರ್ಥನೆ ಬಿಂಬ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತುರಾಕ್ಕೋಘ್ನ ಹೋಮ ಮತ್ತು ವಾಸ್ತು ಬಲಿ ಜರುಗಲಿದೆ ಎಂದು ತಿಳಿಸಿದ್ದಾರೆ. ಏ.೯ ರಂದು ಗುರುವಾರ ಬೆಳಗ್ಗೆ, ೭ ಗಂಟೆಯಿಂದ ಗಣಪತಿ ಹೋಮ ಇತ್ಯಾದಿ ಜರುಗಲಿದ್ದು ಸಂಜೆ ೬ ಗಂಟೆಯಿಂದ ಆದಿವಾಸ ಹೋಮ, ಧ್ಯಾನಾಧಿವಾಸ, ಪ್ರಸಾದ ಅಧಿವಾಸ ಜರುಗಲಿದೆ.
ಏ.೧೦ ರಂದು ಬೆಳಗ್ಗೆ ೭ ಗಂಟೆಯಿಂದ ಗಣಪತಿ ಹೋಮ, ತತ್ವಕಲಶ ಪೂಜೆ, ತತ್ವ ಹೋಮ, ಮಧ್ಯಾಹ್ನ ೧೧.೪೧ ಗಂಟೆಯ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಟೆ, ಜೀವಕಲಶಾಭಿಷೇಕ, ಪ್ರಾಣ ಪ್ರತಿಷ್ಟೆ, ಹೋಮಕಲಶಾಭಷೇಕ, ತತ್ವ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ ಗಂಟೆಗೆ ಬ್ರಹ್ಮ ಕಲಶಾಭಿಷೇಕ, ೧.೩೦ ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಬೋಪಣ್ಣ, ಸದಸ್ಯರಾದ ದೀನಾ ಬೆಳ್ಯಪ್ಪ, ಮದು ಬಿದ್ದಪ್ಪ, ಸತೀಶ್ ಸುಬ್ಬಯ್ಯ ಉಪಸ್ಥಿತರಿದ್ದರು.