ಮಕ್ಕಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ: ಶಾಸಕ ಎಎಸ್ ಪೊನ್ನಣ್ಣ
ಮೂರ್ನಾಡು:ಚೇನಂಡ ಕುಟುಂಬದವರು ಆಯೋಜಿಸಿದ ಜಿಲ್ಲಾಮಟ್ಟದ ಶಾಲಾ ಮಕ್ಕಳ ಹಾಕಿ ಟೂರ್ನಮೆಂಟ್ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಮಡಿಕೇರಿ ತಾಲೂಕು ಮೂರ್ನಾಡಿನ ಮೈದಾನದಲ್ಲಿ ನಡೆಯುತ್ತಿರುವ ಈ ಟೂರ್ನಮೆಂಟ್ ಗೆ ಶುಭಕೋರಿ ಮಾತನಾಡಿದ ಶಾಸಕರು, ಶಾಲಾ ಮಕ್ಕಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಸರ್ವತೋಮುಖದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಇಂದಿನ ಮಕ್ಕಳೇ ದೇಶದ ಭವಿಷ್ಯ ಎಂಬ ಮಾತಿದೆ. ಇದನ್ನು ಸತ್ಯವಾಗಿಸಲು ಎಲ್ಲರೂ ಉತ್ತಮವಾಗಿ ಸರ್ವತೋಮುಖ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಯಶಸ್ಸು ಕಾಣುವ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಆಟದಲ್ಲಿ ಗೆಲುವು-ಸೋಲು ಸಹಜ. ಎರಡನ್ನು ಸಮಾನವಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನು ಕಾಣುವಳು ಪ್ರಯತ್ನಿಸುವುದು ನಿಜವಾದ ಕ್ರೀಡಾ ಸ್ಪೂರ್ತಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು, ಶಾಲಾ ಮಕ್ಕಳೊಂದಿಗೆ ಹಲವು ಅಮೂಲ್ಯ ಸಮಯ ಕಳೆದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು, ಚೇಂನಂಡ ಕುಟುಂಬದ ಅಧ್ಯಕ್ಷರು ಪಿ ಕರುಂಬಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಪಾಂಡಾಂಡ ಬೋಪಣ್ಣ, ಒಲಂಪಿಯನ್ ಚೆಪ್ಪುಡೀರ ಪೂಣಚ್ಚ, ಹಾಗೂ ಚೇಂನಂಡ ಕುಟುಂಬಸ್ಥರು ಉಪಸ್ಥಿತರಿದ್ದರು.