ಮನೆ ದುರಸ್ತಿಗೆ ಅಧಿಕ ಮೊತ್ತದ ಹಣ ಪಡೆದು ಕಡಿಮೆ ವೆಚ್ಚದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಗುತ್ತಿಗೆದಾರನಿಗೆ ಬಿತ್ತು ದಂಡ
ಮಡಿಕೇರಿ: ಮನೆ ದುರಸ್ತಿ ಸಂಬಂಧ ಅಧಿಕ ಮೊತ್ತದ ಹಣ ಪಡೆದು ಕಡಿಮೆ ವೆಚ್ಚದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಗುತ್ತಿಗೆದಾರನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ ವಿಧಿಸಲಾಗಿದೆ.
ಜಿಲ್ಲೆಯ ಕೊಳತೋಡು ಗ್ರಾಮದ ಬೈಗೋಡು ನಿವಾಸಿ ಕೆ.ಎಸ್. ಪಾರ್ವತಿ ಎಂಬವರು ಸುದೇಶ್ ಕೆ. ಎಂಬ ಗುತ್ತಿಗೆದಾರರಿಗೆ ತಮ್ಮ ಸ್ವಂತ ಮನೆಯ ದುರಸ್ತಿ ಕೆಲಸ ವಹಿಸಿದ್ದರು. ಮನೆಯ ದುರಸ್ತಿ ಕೆಲಸವನ್ನು ರೂ. 85,000 ಗಳಿಗೆ ಮುಗಿಸಿಕೊಡುವುದಾಗಿ ತಿಳಿಸಿ ಗುತ್ತಿಗೆದಾರ ಪೂರ್ತಿ ಹಣ ಪಡೆದುಕೊಂಡಿದ್ದರು. ಆದರೆ ಗುತ್ತಿಗೆದಾರ ಕೇವಲ ರೂ. 23,000 ವೆಚ್ಚದಲ್ಲಿ ಮಾತ್ರ ದುರಸ್ತಿ ಕೆಲಸ ಮಾಡಿರುವುದು ಹಾಗೂ ಇನ್ನೂ ಕೆಲಸಗಳು ಬಾಕಿ ಇರುವುದನ್ನು ತಿಳಿದ ಪಾರ್ವತಿ ಅವರು ಗುತ್ತಿಗೆದಾರರ ವಿರುದ್ಧ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಿ ಬಾಕಿ ಹಣವನ್ನು ಕೊಡಿಸುವಂತೆ ಮನವಿ ಮಾಡಿದ್ದರು.
ದೂರನ್ನು ದಾಖಲಿಸಿಕೊಂಡು ಉಭಯ ಕಡೆಯವರ ವಾದ ವಿವಾದವನ್ನು ಆಲಿಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಚಂಚಲ ಸಿ.ಎಂ. ಮತ್ತು ಸದಸ್ಯೆ ಗೌರಮ್ಮಣ್ಣಿ ಅವರುಗಳು ಗುತ್ತಿಗೆದಾರರಿಗೆ ದಂಡ ವಿಧಿಸಿದ್ದಾರೆ. ಸೇವಾ ನ್ಯೂನತೆಗೆ ಪರಿಹಾರವಾಗಿ ರೂ. 35,000, ಮಾನಸಿಕ ವೇದನೆಗಾಗಿ ರೂ. 7,000 ಮತ್ತು ಇತರೆ ಖರ್ಚು ವೆಚ್ಚಗಳಿಗಾಗಿ ರೂ. 3,000 ಪಾವತಿಸಬೇಕೆಂದು ನೀಡಿದ್ದಾರೆ.