ಧರ್ಮಸ್ಥಳ ಪ್ರಕರಣ | 3,932 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ SIT; ಕಾಲಾವಕಾಶಕ್ಕೆ ಬೇಡಿಕೆ
ಮಂಗಳೂರು, ನ. 20: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ವಿಶ್ಲೇಷಣಾತ್ಮಕ ತನಿಖೆಯ ಬಳಿಕ ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ 3,932 ಪುಟಗಳ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಸಿದೆ.
ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ SIT ತಂಡ ಸಲ್ಲಿಸಿದ ಏಳು ಫೈಲ್ ಗಳ ದೋಷಾರೋಪ ಪಟ್ಟಿಯಲ್ಲಿ ಪ್ರಮುಖ ಆರೋಪಿ ಚಿನ್ನಯ್ಯ ನೀಡಿದ ಹೇಳಿಕೆ, 17ಕ್ಕೂ ಹೆಚ್ಚು ಜಾಗಗಳಲ್ಲಿ ನಡೆದ ಸಮಾಧಿ ಶೋಧನೆಯ ವಿವರಗಳು, ಜೊತೆಗೆ ಚಿನ್ನಯ್ಯನ ಸಂಪರ್ಕದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಮೊದಲಾದವರ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳಿಗೆ SIT ನೋಟಿಸ್ ನೀಡಿದ್ದರೂ, ವಿಚಾರಣೆ ಮೇಲೆ ಕೋರ್ಟ್ ತಾತ್ಕಾಲಿಕ ತಡೆ ಆದೇಶ ನೀಡಿರುವುದರಿಂದ, ಹಲವು ಪ್ರಮುಖ ವಿಚಾರಣೆಗಳು ಇನ್ನೂ ಬಾಕಿ ಉಳಿದಿವೆ. ಅದಕ್ಕೆ ಲ್ಯಾಬ್ ವರದಿ ಕೂಡ ಇನ್ನೂ ಬಂದಿಲ್ಲ.
ಚಾರ್ಜ್ಶೀಟ್ ಜೊತೆಗೆ ಮುಂದಿನ ತನಿಖೆ ನಡೆಸಲು ಅಗತ್ಯವಾದ ಮಾರ್ಗದರ್ಶನ ಮತ್ತು ಅವಧಿ ನೀಡುವಂತೆ SIT ನ್ಯಾಯಾಲಯಕ್ಕೆ ಮನವಿ ಮಾಡಿದೆ. SIT ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ನಿರ್ದೇಶನ ನೀಡುವ ಸಾಧ್ಯತೆ ಇದೆ.
ಬೆಳ್ತಂಗಡಿ ಕೋರ್ಟ್ಗೆ ವರದಿ ಸಲ್ಲಿಕೆ ಬಳಿಕ, SIT ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ತನಿಖೆಯ ಪ್ರಗತಿ ವರದಿಯನ್ನು ಸರ್ಕಾರಕ್ಕೂ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.