ಡಿ.07ರಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಕರೋಲ್ ಗಾಯನ ಸ್ಫರ್ಧೆ
ವಿರಾಜಪೇಟೆ: ಸಮುದಾಯದ ಏಳಿಗೆ, ಧೃಡತೆ ಐಕ್ಯತೆ ಹಾಗೂ ಸಂಕಲ್ಪದ ಅಡಿಯಲ್ಲಿ ಮುಂಬರುವ ಕ್ರಿಸ್ಮಸ್ ಅಚರಣೆ ಮಹತ್ವದ ಕುರಿತು, ರೋಮನ್ ಕ್ಯಾಥೋಲಿಕ್ ಸಮುದಾಯ ವತಿಯಿಂದ ಡಿಸೆಂಬರ್ 7 ರಂದು ಜಿಲ್ಲಾ ಮಟ್ಟದ ಕರೋಲ್ ಗಾಯನ್ ಸ್ಪರ್ಧೆ ಕ್ರಿಸ್ಮಸ್ ಗಾನ ತರಂಗ- 2025 ಆಯೋಜಿಸಲಾಗಿದೆ ಎಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಜಿಲ್ಲೆ ಮತ್ತು ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ಘಟಕಗಳು ಹಾಗೂ ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ಆಶ್ರಯದಲ್ಲಿ ನಗರದ ಪ್ರವಾಸಿ ಕೇಂದ್ರದಲ್ಲಿ ಕ್ರಿಸ್ಮಸ್ ಗಾನ ತರಂಗ 2025 ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ಮತ್ತು ಪೊನ್ನಂಪೇಟೆ ಘಟಕಗಳ ಅಧ್ಯಕ್ಷರಾದ ಅಂಥೋನಿ ರಾಬಿನ್ ಅವರು, ಕರೋಲ್ ಗಾಯನವು ಕ್ರೈಸ್ತ ಧರ್ಮ ಬಾಂಧವರು ಆಚರಿಸುವ ಕ್ರಿಸ್ಮಸ್ ಹಬ್ಬದ ಒಂದು ಭಾಗವಾಗಿದ್ದು ಇದನ್ನು ಸ್ಪರ್ಧಾ ರೂಪದಲ್ಲಿ ಕಾರ್ಯಕ್ರಮ ಆಯೋಜಿಸಿ ಎಲ್ಲಾ ಧರ್ಮ ಕೇಂದ್ರದ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಕರೆತರುವ ವಿಧವಾಗಿದೆ.
ಕ್ರಿಸ್ಮಸ್ ಗಾಯನ ಸ್ಪರ್ಧೆಯನ್ನು ಮೊದಲಿಗೆ ಕೂಡಿಗೆಯಲ್ಲಿ, ನಂತರ ಸುಂಟಿಕೊಪ್ಪ ಹಾಗೂ ಇದೀಗಾ ಮೂರನೇ ವರ್ಷದ ಕಾರ್ಯಕ್ರಮವಾಗಿ ವಿರಾಜಪೇಟೆ ಸಂತ ಅನ್ನಮ್ಮ ದ್ವಿಶತಮಾನ ಭವನದ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ತಾ. 07-12-2025 ರಂದು ನಡೆಯುವ ಸ್ಪರ್ಧೆಯಲ್ಲಿ ಮೈಸೂರು ಧರ್ಮ ಕೇಂದ್ರಕ್ಕೆ ಒಳಪಟ್ಟ ಒಟ್ಟು 26 ಧರ್ಮ ಕೇಂದ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಅಲ್ಲದೆ ಸ್ಪರ್ಧೆಯಲ್ಲಿ ಎರಡು ಭಾಗಗಳಾಗಿ ವಿಂಗಡಿಸಿ ಧರ್ಮ ಕೇಂದ್ರದ ಗಾಯನ ವೃಂದ ಮತ್ತು ಧರ್ಮ ಕೇಂದ್ರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಹಾಡುಗಳು ಕ್ರಿಸ್ಮಸ್ ಗೆ ಸಂಭಂದಿಸಿದ ಕನ್ನಡ ಭಾಷೆಯಲ್ಲಿ ಗಾಯನಕ್ಕೆ ಅವಕಾಶ ನೀಡಲಾಗಿದೆ. ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರು ಕನಿಷ್ಟ 5 ಮಂದಿ ಗರಿಷ್ಟ 20 ಮಂದಿಗೆ ಅವಕಾಶವಿದೆ. ಸಾಹಿತ್ಯ, ಸಂಗೀತ ಮತ್ತು ಅಭಿನಯದ ಆಧಾರದ ಮೇಲೆ ತೀರ್ಪು ನೀಡಲಾಗುತ್ತದೆ. ಗಾಯನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಅಕರ್ಷಕ ಟ್ರೋಪಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಜಿಲ್ಲೆ ಉಪಾಧ್ಯಕ್ಷರಾದ ಜೋಕಿಂ ರೋಡ್ರಿಗ್ರಸ್ಸ್ ಅವರು ಮಾತನಾಡಿ, ಕರೋಲ್ ಗಾಯನ ಸ್ಪರ್ಧೆಯೊಂದಿಗೆ 06 ವರ್ಷದ ಒಳಗಿರುವ ವಿಭಾಗದಲ್ಲಿ (ಕ್ರಿಸ್ಮಸ್ ಟ್ರೀ ಮತ್ತು ಕ್ರಿಸ್ಮಸ್ ಸ್ಟಾರ್) ಮತ್ತು 06-10 ವರ್ಷದ ಮಕ್ಕಳಿಗೆ (ಸಾಂತಾ ಕ್ಲಾಸ್) ಚಿತ್ರಕಲಾ ಸ್ಪರ್ಧೆ ಢರ್ಪಡಿಸಲಾಗಿದೆ. ಚಿತ್ರಕಲಾ ಸ್ಪರ್ಧೆಗೆ ಡ್ರಾಯಿಂಗ್ ಹಾಳೆ ಕ್ರೆಯಾನ್ಸ್ ಮತ್ತು ಪೆನ್ಸಿಲ್ ಆಯೋಜಕರಿಂದ ನೀಡಲಾಗುತ್ತದೆ. ಆಯೋಜಕರು ಮತ್ತು ತೀರ್ಪುಗಾರರ ನಿಬಂಧನೆಗಳಿಗೆ ಬದ್ಧರಾ್ಇ ಸ್ಪರ್ಧೆ ನಡೆಯಲಿದ್ದು, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸ್ಪರ್ಧೆಯಿಂದ ಹೊರ ಹಾಕಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೈಸೂರು ಧರ್ಮ ಕೇಂದ್ರದ ಪ್ರದಾನ ಧರ್ಮ ಗುರುಗಳು ಹಾಗೂ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು, ಕನ್ಯಾ ಸ್ತ್ರೀಯರು ಹಾಗೂ ಶಾಸಕರುಗಳು, ವಿವಿಧ ಕ್ಷೇತ್ರ ಗಣ್ಯರು ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ತಂಡಗಳ ನೋಂದಣಿ ಶುಲ್ಕ 500 ರೂಗಳು ಮತ್ತು ನೋಂದಣಿಗೆ 05-12-2025 ಕೊನೆ ದಿನವಾಗಿದೆ.ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ 9901278304,9880202025,7676854674 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ರ್ವೀನ್ ಲೋಬೋ, ತಾ. ಉಪಧ್ಯಕ್ಷರಾದ ಅಂಥೋನಿ ಜೋಸೇಫ್, ಮತ್ತು ತಾ. ಕಾರ್ಯಧಶಿಗಳಾದ ಸ್ಟಾಲೋನ್ ಅವರುಗಳು ಉಪಸ್ಥಿತರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ