ಮತ್ತು ಬರಿಸುವ ಸಿರಪ್ ಅಕ್ರಮ ಮಾರಾಟ: ಐವರ ಬಂಧನ

ಮತ್ತು ಬರಿಸುವ ಸಿರಪ್ ಅಕ್ರಮ ಮಾರಾಟ: ಐವರ ಬಂಧನ

ದಾವಣಗೆರೆ, ಅ.14: ಅಮಲು ಉಂಟುಮಾಡುವ ಸಿರಪ್ ನ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರನ್ನು ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ತಂಡ ಬಂಧಿಸಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

 ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರನ್ನು ಎಸ್‌ಪಿಎಸ್ ನಗರದ ಶಿವಕುಮಾರ್ (38), ಮಹಬೂಬ್ ನಗರದ ಅಜೀಮುದ್ದೀನ್ (37), ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್‌ನ ಮಹಮ್ಮದ್ ಶಾರೀಕ್ (35), ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು ಹಾಗೂ ಚನ್ನಗಿರಿ ಪಟ್ಟಣದ ಅಬ್ದುಲ್ ಗಫಾರ್ ಅಲಿಯಾಸ್ ಆಟೋಬಾಬು ಎಂದು ಗುರುತಿಸಲಾಗಿದೆ.

ಮಾದಕ ದ್ರವ್ಯ ನಿಗ್ರಹ ಪಡೆಯ ಪಿಎಸ್‌ಐ ಸಾಗರ್ ಅತ್ತರವಾಲ್ ನೇತೃತ್ವದ ತಂಡ ದೇವರಾಜ ಅರಸು ಬಡಾವಣೆಯ ಮೇಲೇತುವೆ ಬಳಿ ಗಸ್ತಿನಲ್ಲಿದ್ದ ವೇಳೆ ಅಮಲು ಸಿರಪ್ ಬಾಟಲಿಗಳ ಅಕ್ರಮ ಮಾರಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಐವರನ್ನು ಬಂಧಿಸಲಾಯಿತು.

ಕಾರ್ಯಾಚರಣೆಯಲ್ಲಿ ಒಟ್ಟು ₹1.25 ಲಕ್ಷ ಮೌಲ್ಯದ ವಿವಿಧ ಸಿರಪ್ ಬಾಟಲಿಗಳು, ₹1,200 ನಗದು ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ. ವೈದ್ಯರ ಸಲಹೆ ಇಲ್ಲದೆ, ಕಾನೂನುಬಾಹಿರವಾಗಿ ಅಮಲು ಉಂಟುಮಾಡುವ ಸಿರಪ್ ನ ಬಾಟಲಿಗಳನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ವಿರುದ್ಧ ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.