ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ: ಎಸ್ಪಿಗೆ ದೂರು ನೀಡಿದ ಬಿಜೆಪಿ ಮಹಿಳಾ ಮೋರ್ಚಾ

Mar 4, 2026 - 17:52
Mar 4, 2026 - 17:59
 0  1.3k
ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ: ಎಸ್ಪಿಗೆ ದೂರು ನೀಡಿದ ಬಿಜೆಪಿ ಮಹಿಳಾ ಮೋರ್ಚಾ

ಮಡಿಕೇರಿ; ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಡಿಕೇರಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ಕುಶಾಲನಗರ ಗುಮ್ಮನ ಕೊಲ್ಲಿಯ ಜಿ.ಆರ್. ಪುಷ್ಪಲತಾ ಅಡ್ಮಿನ್ ಆಗಿರುವ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದ ಬಿ.ಜಿ. ಸುನಿತಾ ಎಂಬವರು ಫೆ.27 ರಂದು ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹಾಗೂ ಇಸ್ಮಾಯಿಲ್ ನಡುವಿನ ಸಂಬಂಧವೇನು ಎಂಬ ಶಿರೋನಾಮೆಯಡಿಯಲ್ಲಿ ಹಲ್ಲೆ ಪ್ರಕರಣ ಬೋಪಯ್ಯನವರು ವ್ಯವಸ್ಥಿತವಾಗಿ ಪಿತೂರಿ ಮಾಡಿರುವುದಾಗಿದೆ ಎಂಬಿತ್ಯಾದಿ ಇಲ್ಲ - ಸಲ್ಲದ ಆರೋಪಗಳನ್ನು ಮಾಡಿದ್ದಾರೆ.

ಇದನ್ನು ಹಾಕತ್ತೂರು ವಲಯ ೦೩ ಬೂತ್ ಎಂಬ ಗ್ರೂಪ್‌ನಲ್ಲಿ ದಂಬೆಕೋಡಿ ಭೀಷ್ಮ ಎಂಬವರ ಪತ್ನಿ ಕವನ ಎಂಬವರು ಫಾರ್ವರ್ಡ್ ಮಾಡಿದ್ದಾರೆ. ಹಾಲಿ ಶಾಸಕರು ಇಸ್ಮಾಯಿಲ್ ಅವರಿಗೆ ಸಹಾಯ ಮಾಡುತ್ತಿಲ್ಲ. ಇದನ್ನು ಕೆಜಿಬಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬುದಾಗಿಯೂ ಸುಳ್ಳು ಆಪಾದನೆ ಮಾಡಿದ್ದಾರೆ. ಇಂತಹ ಸುಳ್ಳು ಆಪಾದನೆ ಮಾಡಿ ಜಿಲ್ಲೆಯಲ್ಲಿ ಜಾತಿ ಮತ್ತು ಕೋಮು ಸಂಘರ್ಷ ಉಂಟು ಮಾಡುತ್ತಿರುವ ಪುಷ್ಪಲತಾ, ಸುನಿತಾ ಹಾಗೂ ಕವನ ಹಾಗೂ ಇದರ ಮೂಲ ರೂವಾರಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

ದೂರು ನೀಡಿದ ಸಂದರ್ಭದಲ್ಲಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಸೌಮ್ಯ, ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಕನ್ನಿಕೆ, ನಗರ ಕಾರ್ಯದರ್ಶಿ ನವ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಪ್ರಮುಖರುಗಳಾದ ಶಾಂತೆಯಂಡ ರವಿ ಕುಶಾಲಪ್ಪ, ನಾಗೇಶ್ ಕುಂದಲ್ಪಾಡಿ, ಬಿ.ಕೆ. ಜಗದೀಶ್, ಅರುಣ್ ಶೆಟ್ಟಿ, ಗಜೇಂದ್ರ, ಪೂಣಚ್ಚ, ಅಜಿತ್ ನಾಣಯ್ಯ, ಬಿ.ಎ. ಹರೀಶ್, ಕಾಂಗೀರ ಅಶ್ವಿನ್, ತೆಕ್ಕಡೆ ಶೋಭ ಇತರರಿದ್ದರು.

What's Your Reaction?

Like Like 1
Dislike Dislike 0
Love Love 2
Funny Funny 4
Angry Angry 0
Sad Sad 1
Wow Wow 0