ಗುಡ್ಡೆಹೊಸೂರು:ಅಕ್ರಮವಾಗಿ ಮರಗಳ ಹನನ,ಪ್ರಕರಣ ದಾಖಲು

ಗುಡ್ಡೆಹೊಸೂರು:ಅಕ್ರಮವಾಗಿ ಮರಗಳ ಹನನ,ಪ್ರಕರಣ ದಾಖಲು

ಕುಶಾಲನಗರ, ಡಿ 27: ಗುಡ್ಡೆಹೊಸೂರು ಗ್ರಾಮದ ಸರ್ವೆ ನಂ 23/2 ರಲ್ಲಿ ಅಕ್ರಮವಾಗಿ ಅಕೇಶಿಯ ಮರಗಳನ್ನು ಕಡಿದು ನಾಟಗಳಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟ ಆರೋಪಿಗಳ ವಿರುದ್ದ ಕುಶಾಲನಗರ ಅರಣ್ಯ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ. (ತೇಗದ ಮರಗಳನ್ನು‌ ಕೂಡ ಅಕ್ರಮವಾಗಿ ಕಡಿದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಮೊಕದ್ದಮೆ ದಾಖಲಾಗಿದೆ.)

ಈ ಸರ್ವೆ ನಂಬರ್ ನಲ್ಲಿ ಇದ್ದ ಸಿಲ್ವರ್ ತೋಟಕ್ಕೆ‌ ಮಣ್ಣು ಸುರಿದು ಸಮತಟ್ಟು ಮಾಡುವ ಕಾಮಗಾರಿ‌ ನಡುವೆ ಕಾವೇರಿ ನದಿಯಂಚಿನಲ್ಲಿ ಇದ್ದ ಹೈಬ್ರೀಡ್ ಅಕೇಶಿಯ ತಳಿಯ ಮರಗಳನ್ನು ಅಕ್ರಮವಾಗಿ ಹನನ ಮಾಡಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ವಿರಾಜಪೇಟೆಯ ಚೆನ್ನಯ್ಯನ ಕೋಟೆಯ ಪೈಸಾರಿ ನಿವಾಸಿ ಮೂಸಾ ಹಾಜಿ ಎ.ಎ. ಅವರ ಪುತ್ರ ಹುರೇಶ್ ಎ.ಎಂ ಹಾಗೂ ಸದರಿ ಜಾಗದ ಮಾಲೀಕ ಸಿದ್ದಾಪುರ ಒಂಟಿಯಂಗಡಿಯ ಮುಕ್ಕಾಟಿರ ಎನ್. ಕಾರ್ಯಪ್ಪ ಅವರ ಪುತ್ರ ಎಂ.ಎಸ್.ಕರುಂಬಯ್ಯ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಸದರಿ ಸ್ಥಳದಲ್ಲಿ ಕಾವೇರಿ ನದಿ ತಟದ ಬಫರ್ ಜೋನ್ ಗೆ ಅಪಾರ ಪ್ರಮಾಣದ ಮಣ್ಣನ್ನು ಸುರಿದು ಸಮತಟ್ಟು ಮಾಡುತ್ತಿರುವುದು ಕೂಡ ಕಂಡುಬಂದಿದೆ.