ಎಮ್ಮೆಮಾಡುವಿನಲ್ಲಿ ನೇಣು ಬಿಗಿದು ಅತಿಥಿ ಶಿಕ್ಷಕಿ ಆತ್ಮಹತ್ಯೆ:ಕೊಲೆ ಶಂಕೆ ಆರೋಪ

ನಾಪೋಕ್ಲು:ನಾಪೋಕ್ಲು ಪೊಲೀಸ್ ಠಾಣಾವ್ಯಾಪ್ತಿಯ ಎಮ್ಮೆಮಾಡುವಿನಲ್ಲಿ, ಗ್ರಾಮದ ನಿವಾಸಿ ನಜೀರ್ ಎಂಬುವವರ ಪತ್ನಿ ಸಫ್ರೀನಾ ಶೇಕ್ (32)ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಫ್ರೀನ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ಮಧ್ಯರಾತ್ರಿ ಎಮ್ಮೆ ಮಾಡುವಿನ ಮನೆಯಲ್ಲಿ ಸಫ್ರೀನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಪೋಕ್ಲುವಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಪತಿ ನಜೀರ್ ಸಫ್ರೀನಾಳನ್ನು ಕರೆತರುವಷ್ಟರಲ್ಲಿ ಸಫ್ರೀನ ಮೃತಪಟ್ಟಿರುವ ಬಗ್ಗೆ ವೈದ್ಯರು ಪರೀಕ್ಷಿಸಿ ದೃಢಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಪತಿ ನಜೀರ್ ಹಾಗೂ ಸಫ್ರೀನ ನಡುವೆ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಮೃತ ಸಫ್ರೀನ ದೇಹದಲ್ಲಿ ಗಾಯಗಳ ಗುರುತು ಇದ್ದು ಪತಿ ನಜೀರ್ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಸಫ್ರಿನ ಸಹೋದರ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಸಫ್ರೀನ ಸಹೋದರ ರುವೈಸ್ ನಾಪೋಕ್ಲು ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಮಡಿಕೇರಿ ಜಿಲ್ಲಾ ಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ದಾಖಲಿಸಲಾಗಿದೆ. ವೈದ್ಯರ ಪರಿಶೀಲನೆ ಮತ್ತು ಪೊಲೀಸರ ತನಿಕೆಯಿಂದಷ್ಟೇ ಕೊಲೆ ಶಂಕೆಯ ಸತ್ಯ ಸತ್ಯತೆ ಹೊರಬರಬೇಕಾಗಿದೆ.
ವರದಿ:ಝಕರಿಯಾ ನಾಪೋಕ್ಲು