ಪೆರುಂಬಾಡಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
ವಿರಾಜಪೇಟೆ: ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಸಂಸ್ಕೃತಿ ಉಳಿಸುವುದು, ಯುವ ಜನರಿಗೆ ಧಾರ್ಮಿಕ ಮೌಲ್ಯ ಪರಿಚಯಿಸುವ ಉದ್ದೇಶದಿಂದ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ ಎಂದು ಮಂಗಳೂರು ವಿಭಾಗದ ಕುಟುಂಬ ಪ್ರಭೋದನ್ ವಿಭಾಗ ಸಂಯೋಜಕ ಮಂಜೇಶ್ವರದ ಜಿತೇಂದ್ರ ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಆರ್ಜಿ, ಬೇಟೋಳಿ ಮಂಡಲದ ವತಿಯಿಂದ ಕೋಟಿ ಸವಾಲಿಗೆ ಉತ್ತರ ಒಂದೇ ಹಿಂದೂ ಭಾವದ ಜಾಗರಣ ಎನ್ನುವ ಧ್ಯೇಯದಡಿ ಪೆರುಂಬಾಡಿಯ ವಾಲ್ಮೀಕಿ ಭವನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂಸೇವಕರು ಸಂಘದ ಸತಾಬ್ದಿಯ ಸಂಬAಧ ದೇಶದಾದ್ಯಂತ ೮೦,೦೦೦ ಸ್ಥಳಗಳಲ್ಲಿ ಹಿಂದುಗಳು ರಾಷ್ಟ್ರ ಧರ್ಮ, ಸಂಸ್ಕೃತಿ ಹಾಗೂ ಸಮಾಜದಲ್ಲಿ ನಮ್ಮ ಕರ್ತವ್ಯ ಏನೆಂದು ಚಿಂತನೆ ನಡೆಸಲು ಒಟ್ಟು ಸೇರುತ್ತಿದ್ದಾರೆ. ಇದು ಸಂಘವನ್ನು ವಿಜೃಂಭಿಸಿ ಮಾತನಾಡುವ ಭಾಷಣದ ಕಾರ್ಯಕ್ರಮವವಲ್ಲ. ಹಿಂದುವಾಗಿ ಧರ್ಮದ ಉಳಿವಿಗೆ ನಾವೇನು ಮಾಡಬೇಕೆಂಬುದರ ಬಗ್ಗೆ ತಿಳಿಯುವ ಕಾರ್ಯಕ್ರಮ. ಯಾರನ್ನೋ ಇಲ್ಲಿಂದ ಓಡಿಸಿ ಹಿಂದೂ ರಾಷ್ಟ್ರವನ್ನು ಕಟ್ಟುವುದು ನಮ್ಮ ಸಂಸ್ಕತಿಯಲ್ಲ ಎಲ್ಲರನ್ನೂ ಒಟ್ಟು ಸೇರಿಸಿ ದೇಶವನ್ನು ಪರಮವೈಭವದತ್ತ ಕೊಂಡೊಯ್ಯವುದೇ ನಮ್ಮ ಹಿಂದೂ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ಭಾರತದ ಸುಂದರವಾದ ಮೌಲ್ಯಯುತ ಕೌಟುಂಬಿಕ ವ್ಯವಸ್ಥೆಯನ್ನು ಪಶ್ಚಿಮಾತ್ಯ ದೇಶಗಳು ಹಾಡಿ ಹೊಗಳುತ್ತಿವೆ. ಈ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅವಿಭಕ್ತ ಕುಟುಂಬವೇ ಹಿಂದೂ ಧರ್ಮದ ಅತಿ ದೊಡ್ಡ ಶಕ್ತಿ. ಕುಟುಂಬದಲ್ಲಿ ಯಾರು ಬೇರ್ಪಟ್ಟು ಹೋಗದೆ ಒಟ್ಟಾಗಿ ಬದುಕುವ ಸಂಸ್ಕಾರ ನಮ್ಮ ಧರ್ಮದ ಮೂಲ. ಇತ್ತೀಚಿನ ನಗರ ವ್ಯಾಮೋಹ ಹಾಗೂ ಆಧುನಿಕ ಜೀವನ ಶೈಲಿಯಿಂದ ಕುಟುಂಬ ವಿಚ್ಛೇದನ ಹೆಚ್ಚಾಗುತ್ತಿದೆ. ಇದು ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಾರಕವಾಗುವ ಅಪಾಯವಿದೆ. ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹಾಗೆಯೇ ಭವ್ಯ ಭಾರತ ನಿರ್ಮಾಣದತ್ತ ಎಲ್ಲರೂ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಹಿಂದೂ ಸಂಗಮ ಕಾರ್ಯಕ್ರಮದ ಸಂಚಾಲಕರಾದ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಸನಾತನ ಧರ್ಮದ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಆದರೆ ವೈವಿಧ್ಯಮಯವಾದ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಯುವಪೀಳಿಗೆಗೆ ಇದೆ. ನಮ್ಮೊಳಗಿನ ಮನಸ್ಸಿನಿಂದ ಪರಿವರ್ತನೆ ಆಗುವ ದೊಡ್ಡ ಸಂಕಲ್ಪ ಮಾಡುವ, ಅ ಮೂಲಕ ಸನಾತನ ಧರ್ಮದ ಉಳಿವು ನಿಶ್ಚಿತ. ಎಲ್ಲಾ ಹಿಂದೂಗಳು ಹಿಂದುತ್ವದ ಒಳಗಡೆ ಬರಬೇಕು, ಜಾತಿ ವೈಷಮ್ಯ, ರಾಜಕೀಯ ವೈಷಮ್ಯಗಳಿರಬಾರದು ಎಂಬ ದೃಷ್ಟಿಯಿಂದ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದಾಗಿದೆ. ಹಿಂದೂವಾಗಿ ಹುಟ್ಟಿದ ಮೇಲೆ ಹಿಂದೂವಾಗಿ ಪ್ರಕಟಿತವಾಗಬೇಕು. ಆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ಹಿರಿಯರು, ಮಾಜಿ ಸೈನಿಕರು ಆದ ಭವಾನಿ ಶಂಕರ್ ಮಾತನಾಡಿ ಇದೊಂದು ಧಾರ್ಮಿಕ ಉತ್ಸವವಾಗಿರದೆ ಸಮಾಜದಲ್ಲಿ ಏಕತೆ, ಸಹಕಾರ ಮನೋಭಾವನೆ, ಸ್ವಾಭಿಮಾನಿ ಹಿಂದೂ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಹಿಂದೂ ಸಂಗಮದಿಂದಾಗಿ ಹಿಂದೂಗಳ ಮಧ್ಯೆ ಹೃದಯಗಳ ಬಂಧನವಾಗಬೇಕು. ಕಳೆದುಹೋದ ಸಂಸ್ಕೃತಿಯನ್ನು ಮತ್ತೆ ಮುಂದಿನ ಪೀಳಿಗೆಗೆ ಹೇಳಿಕೊಡುವಂತಾಗಬೇಕು. ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ರತ್ತು ಕಾವೇರಮ್ಮ ಮಾತನಾಡಿ, ಭಾರತೀಯ ಸಂಸ್ಕೃತಿ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಬೀರುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಉಳಿಸಲು ಹಿಂದೂ ಸಂಗಮ ಅತೀ ಅಗತ್ಯ. ಒಳ್ಳೆಯ ಸಮಾಜದಿಂದ ಉತ್ತಮ ದೇಶದ ನಿರ್ಮಾಣವಾಗುತ್ತದೆ. ಹಿರಿಯರಿಗೆ ಗೌರವ, ಮಕ್ಕಳಿಗೆ ಸಂಸ್ಕಾರ ಜೀವನ ಕೊಡುವುದು ನಮ್ಮ ಜವಬ್ದಾರಿಯಾಗಿದೆ. ಆಧುನಿಕ ಯಾಂತ್ರಿಕ ಜಗತ್ತಿನಲ್ಲಿ ಕುಟುಂಬ ವ್ಯವಸ್ಥೆ ಹಾಳಾಗಿದ್ದು, ಸಮಾಜದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ವಸುದೈವ ಕುಟುಂಬಕಂ ಎನ್ನುವ ದ್ಯೇಯವಾಕ್ಯದಡಿ ಜೀವನ ಸಾಗಬೇಕು. ನಮ್ಮ ಸನಾತನ ಧರ್ಮವನ್ನು, ಸಂಸ್ಕೃತಿಯನ್ನು ಕಳೆದುಕೊಳ್ಳದೆ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ನಿವೃತ್ತ ಪ್ರೊಫೆಸರ್ ಪಟ್ಟಡ ಪೂವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ಧತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ. ಹಿಂದೂ ಸಮಾಜ ಎಂದಿಗೂ ದ್ವೇಷವನ್ನು ಸಾಧಿಸಿಲ್ಲ. ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದೆ. ಹಿಂದು ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಭಾರತದ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಮಾದರಿ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಗಟ್ಟಿಯಾಗಿದೆ ನಾವೆಲ್ಲರೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದರು.
ಹಿಂದೂ ಸಂಗಮದ ಅಂಗವಾಗಿ ಆರ್ಜಿ ಬೇಟೋಳಿ ಜಂಕ್ಷನ್ನಿಂದ ಬೃಹತ್ ಶೋಭಾಯಾತ್ರೆ ನಡೆಯಿತು. ಚಂಡೆ, ಕುಣಿತ ಭಜನೆ ಮೆರವಣಿಗೆಗೆ ಮೆರುಗು ನೀಡಿತು. ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಸಂಚಾಲಕ ಜೀವನ್ ಇದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಬಿ.ಎಂ. ಗಣೇಶ್, ಪೆರುಂಬಾಡಿಯ ಎಂ. ಗಣೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಭಾಂದವರುಗಳು ಪಾಲ್ಗೊಂಡಿದ್ದರು.