ಹೊಸಪೇಟೆ: ಹಾವು ಹಿಡಿಯಲು ಹೋದ ಬಾಲಕ ಸಾವು

ಹೊಸಪೇಟೆ: ಹಾವು ಹಿಡಿಯಲು ಹೋದ  ಬಾಲಕ ಸಾವು
Photo credit: Prajavani (ಫೋಟೋ: ಮೃತ ಯುವಕ)

ಹೊಸಪೇಟೆ (ವಿಜಯನಗರ): ನಗರದ 88 ಮುದ್ಲಾಪುರ ಪ್ರದೇಶದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿಯುವ ಪ್ರಯತ್ನದಲ್ಲಿ ಬಾಲಕನೊಬ್ಬ ಹಾವು ಕಡಿತದಿಂದ ಮೃತಪಟ್ಟ ಘಟನೆ ನ.4ರಂದು ನಡೆದಿದೆ.

ಸಿರಿಸಿನಕಲ್ಲು ಪ್ರದೇಶದ ಅಬ್ದುಲ್ ರಝಾಕ್ ಅಲಿಯಾಸ್ ಅಜ್ಜು (16) ಮೃತ ಬಾಲಕ. ಹಾವು ಹಿಡಿದರೆ ₹500 ಸಿಗುತ್ತದೆ ಎಂಬ ಆಸೆಯಿಂದ ಬಾಲಕ ಹಾವು ಹಿಡಿಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಾವಿನ ಬಾಲ ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ.

ಹಾವು ಕಡಿದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ಯಾರಿಗೂ ಹೇಳದ ಬಾಲಕನ ಆರೋಗ್ಯದಲ್ಲಿ ಏರುಪೇರಾದಾಗ ಕುಟುಂಬಸ್ಥರು ಆತುರದಲ್ಲಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕವಾಗಿ 10 ವಾಯಲ್ ಆಂಟಿ-ಸ್ನೇಕ್ ವೆನಮ್ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಹಾಗೂ ಬಳಿಕ ಹುಬ್ಬಳ್ಳಿಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

“ಘಟನೆ ನ.4ರಂದು ನಡೆದಿದೆ. ಪ್ರಾಥಮಿಕ ಚಿಕಿತ್ಸೆ ವೇಳೆ ಯುವಕನ ಜೀವ ಉಳಿಸಲು ಪ್ರಯತ್ನಿಸಲಾಯಿತು. ಆದರೆ ವೈದ್ಯಕೀಯ ಸಲಹೆ ಮೀರಿ ಕುಟುಂಬಸ್ಥರು ಆಸ್ಪತ್ರೆಯಿಂದ ಬಿಡುಗಡೆ ಪಡೆದು ಕೊಪ್ಪಳಕ್ಕೆ ತೆರಳಿದ್ದರು. ಅಲ್ಲಿ ಯಾವುದೇ ಚಿಕಿತ್ಸೆ ನೀಡದೆ ಹುಬ್ಬಳ್ಳಿಗೆ ಕಳುಹಿಸಲಾಯಿತು. ಬಳಿಕ ಯುವಕ ಮೃತಪಟ್ಟಿದ್ದಾನೆ,” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ್ ತಿಳಿಸಿದ್ದಾರೆ.