ಗಂಡ ಹೆಂಡಿರ ಜಗಳ ಸಾವಿನಲ್ಲಿ ಅಂತ್ಯ | ಕಾಲುವೆಗೆ ಹಾರಿದ ಪತ್ನಿಯ ರಕ್ಷಿಸಲು ಹೋದ ಪತಿಯೂ ಮೃತ್ಯು!

ಗಂಡ ಹೆಂಡಿರ ಜಗಳ ಸಾವಿನಲ್ಲಿ ಅಂತ್ಯ |  ಕಾಲುವೆಗೆ ಹಾರಿದ ಪತ್ನಿಯ ರಕ್ಷಿಸಲು ಹೋದ ಪತಿಯೂ ಮೃತ್ಯು!
Photo credit: TV09 (ಫೋಟೋ: ಮೃತ ದಂಪತಿ)

ಚನ್ನರಾಯಪಟ್ಟಣ, ನ. 24: ಕೌಟುಂಬಿಕ ಕಲಹದ ಬಳಿಕ ಹೇಮಾವತಿ ಕಾಲುವೆಗೆ ಹಾರಿದ ಪತ್ನಿಯನ್ನು ರಕ್ಷಿಸಲು ಮುಂದಾದ ಪತಿ ಕೂಡ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿರುವ ಹೃದಯವಿದ್ರಾವಕ ಘಟನೆ ನಂಬಿಹಳ್ಳಿ ಗ್ರಾಮದ ಬಳಿ ನಡೆದಿದೆ.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ವರ್ಷಗಳ ಹಿಂದೆ ಮದುವೆಯಾದ ಗೋಪಾಲ್ (27) ಮತ್ತು ದೀಪು (24) ಮೃತ ದಂಪತಿಗಳಾಗಿದ್ದಾರೆ. ನಿನ್ನೆ ಸಂಜೆ ದಂಪತಿಯ ನಡುವೆ ಜಗಳ ಹೆಚ್ಚಳಗೊಂಡ ಪರಿಣಾಮ ಆಕ್ರೋಶಗೊಂಡ ದೀಪು ಕಾಲುವೆಗೆ ಹಾರಿದ್ದಾರೆ. ಪತ್ನಿಯನ್ನು ಕಾಪಾಡಲು ಗೋಪಾಲ್ ಕೂಡ ಜಿಗಿದರೂ ನೀರಿನ ರಭಸಕ್ಕೆ ಇಬ್ಬರೂ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮನೆಗೆ ವಾಪಸ್ ಆಗದ ಹಿನ್ನೆಲೆ ಕುಟುಂಬದವರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದು, ಈ ವೇಳೆ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ. ದೀಪು ಅವರ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.