ಕುಂಜಿಲ; ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಅಸ್ಸಾಂ ಮೂಲದ ಕಾರ್ಮಿಕ ಆತ್ಮಹತ್ಯೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಅಸ್ಸಾಂ ಮೂಲದ ಕಾರ್ಮಿಕನನೊಬ್ಬ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಅಸ್ಸಾಂ ರಾಜ್ಯದ ಸೋಲ್ ಪುರಿ ನಿವಾಸಿ ಕಾಜಿಮುದ್ದೀನ್ (27) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ.
ಮೃತ ವ್ಯಕ್ತಿ ಕಕ್ಕಬ್ಬೆ ಗ್ರಾಮದ ಬೆಳೆಗಾರ ದೊರೆ ಎಂಬುವವರ ಲೈನ್ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಜಿಮುದ್ದೀನ್ ಗುರುವಾರ ಪತ್ನಿಯೊಂದಿಗೆ ಕುಂಜಿಲ ಗ್ರಾಮದ ಉಸ್ಮಾನ್ ಎಂಬುವವರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಮೃತ ಕಾಜಿಮುದ್ದೀನ್ ಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಮನೆಗೆ ತೆರಳಿ ಮಾತ್ರೆ ತಿಂದು ಬರುತ್ತೇನೆಂದು ಪತ್ನಿಗೆ ಹೇಳಿ ತೋಟದಿಂದ ತೆರಳಿದ್ದಾನೆ. ಆದರೆ ತೋಟದಿಂದ ಮನೆಗೆ ಮಧ್ಯಾಹ್ನ ಪತ್ನಿ ಊಟಕ್ಕೆ ತೆರಳಿದಾಗ ಪತಿ ಕಾಜಿಮುದ್ದೀನ್ ಮನೆಯಲ್ಲಿರಲಿಲ್ಲ.ಪತ್ನಿ ಶಾಹಿದ ಬೇಗಂ ಪತಿಗೆ ಹಲವು ಬಾರಿ ಫೋನ್ ಕರೆ ಮಾಡಿದ್ದಾರೆ. ಆದರೆ ಫೋನ್ ಕರೆ ಸ್ವೀಕರಿಸದೆ ಇದ್ದು ಊಟದ ಬಳಿಕ ಮರಳಿ ತೋಟಕ್ಕೆ ಪತ್ನಿ ತೆರಳಿದಾಗ ತೋಟದಲ್ಲಿ ಕಾಫಿ ಗಿಡವೊಂದಕ್ಕೆ ಪತಿ ಕಾಜಿಮುದ್ದೀನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೂಡಲೆ ಮಾಲೀಕರಿಗೆ ಘಟನೆ ಬಗ್ಗೆ ತಿಳಿಸಿದಾಗ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆಧಾವಿಸಿದ ನಾಪೋಕ್ಲು ಪೊಲೀಸರು ಪರಿಶೀಲನೆ ನಡೆಸಿ ಮೃತ ಕಾಜಿಮುದ್ದೀನ್ ಪತ್ನಿ ಶಾಹಿದ ಬೇಗಂ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.