ಮಾ.27 ರಿಂದ ಕುಂಜಿಲ ಪೈನರಿ ಮಖಾಂ ಉರೂಸ್ ಆರಂಭ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ಮಾ.27 ರಿಂದ 31ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ತಿಳಿಸಿದ್ದಾರೆ.
ಕುಂಜಿಲ ಪೈನರಿ ಜಮಾಅತ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ,ಧರ್ಮ, ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೌಕತ್ ಅಲಿ ಮನವಿ ಮಾಡಿದರು.
ಜಮಾಅತ್ ಕಾರ್ಯದರ್ಶಿ ಸಹೀದ್ ಪಯ್ಯಡತ್ ಮಾತನಾಡಿ ಮಾ.27ರ ಶುಕ್ರವಾರ ಜುಮಾ ನಮಾಜಿನ ಬಳಿಕ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ.ಸೌಕತ್ ಅಲಿ ದ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಅವರು ಮಖಾಂ ಅಲಂಕಾರ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಅಂದು ರಾತ್ರಿ ಹಂಝ ಮಿಸ್ಬಾಹಿ ಓಟಪಡವು ಧಾರ್ಮಿಕ ಪ್ರವಚನ ನಡೆಸಲಿದ್ದಾರೆ. ಮಾ.28 ರಂದು ರಾತ್ರಿ ಮುಸ್ತಫಾ ಸಖಾಫಿ ತೆನ್ನಲ ಮತಪ್ರವಚನಕ್ಕೆ ನೇತೃತ್ವ ವಹಿಸಲಿದ್ದಾರೆ. ಮಾ.29 ರಂದು ಸಯ್ಯಿದ್ ಎಳಂಗೂರ್ ತಂಙಳ್ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ಮತ್ತು ದುಆ ಮಜ್ಲಿಸ್ ನಡೆಯಲಿದ್ದು,ಅಬ್ದುಲ್ ರಝಕ್ ಅಬ್ರಾರಿ ಧಾರ್ಮಿಕ ಪ್ರವಚನ ನಡೆಸಲಿದ್ದಾರೆ.
ಮಾ.30ರಂದು ಮದ್ಯಾಹ್ನ 1. 30ಗಂಟೆಗೆ ಜಮಾಅತ್ ಅಧ್ಯಕ್ಷರಾದ ಎಂ. ಎ ಸೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇರಳದ ಪ್ರಖ್ಯಾತವಾಗ್ಮಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಅಂದು ಸಂಜೆ 4 ಗಂಟೆಗೆ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಅಂದು ರಾತ್ರಿ ನವಾಸ್ ಮನ್ನಾನಿ ಪನವೂರ್ ಧಾರ್ಮಿಕ ಮತಪ್ರವಚನ ನಡೆಯಲಿದ್ದಾರೆ ಎಂದು ತಿಳಿಸಿದರು.
ಮಾ.31 ರಂದು ರಾತ್ರಿ ಪ್ರಖ್ಯಾತ ವಾಗ್ಮಿ ಹಾಫಿಲ್ ಅಹ್ಮದ್ ಕಬೀರ್ ಬಾಖವಿ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಎಡಪಾಲ ,ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು ಸೇರಿದಂತೆ ಮತ್ತಿತರರು ಪ್ರಮುಖರು ಭಾಗವಹಿಸಲಿದ್ದಾರೆ.
ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಹೀದ್ ಕೋರಿದರು. ಸುದ್ದಿಗೊಷ್ಟಿಯಲ್ಲಿ ಪೈನರಿ ಜಮಾಅತ್ ಉಪಾಧ್ಯಕ್ಷ ವಿ. ಎ.ಅಬ್ದುಲ್ ರಹ್ಮಾನ್(ಅಂದ್ರು), ಕೋಶಾಧಿಕಾರಿ ಹಂಝ ಕುಂಡಂಡ,ದರ್ಸ್ ಸಮಿತಿ ಅಧ್ಯಕ್ಷ ತರ್ಮಲ್ ಹಂಝ,ರಿಲೀಫ್ ಉಪಾಧ್ಯಕ್ಷ ರಶೀದ್ ಮಕ್ಕಿ, ಸಲಹಾ ಸಮಿತಿ ಸದಸ್ಯರಾದ ವಯಕೋಲ್ ಮೂಸ,ಸಲಾಂ ಬಾರಿಕೆ ಉಪಸ್ಥಿತರಿದ್ದರು.
