ಕುಶಾಲನಗರ; ಶಾಫಿ, ಹನಫಿ ಬಾಂಧವರಿಂದ ಬಕ್ರೀದ್ ಹಬ್ಬಾಚರಣೆ
ಕುಶಾಲನಗರ,ಮೇ೨೮: ತ್ಯಾಗ, ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು, ಗುರುವಾರದಂದು ಕುಶಾಲನಗರದ ಶಾಫಿ ಹಾಗೂ ಹನಫಿ ಬಾಂಧವರು ಆಚರಿಸಿದರು. ಬಕ್ರೀದ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿಗೆ ಆಗಮಿಸಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದ ಮುಸಲ್ಮಾನರು, ಒಳ್ಳೆಯ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.
ನಂತರ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಸರ್ವರೂ ಸಾಮರಸ್ಯದಿಂದ ಬದುಕುವಂತೆ ಮನವಿ ಮಾಡಿದರು. ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ತಕ್ವಾ ಮಸೀದಿ, ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣ, ಕೊಡಗರಹಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ಎಲ್ಲಾ ಮಸೀದಿಗಳ ಮುಂಭಾಗ ಪೊಲೀಸರು ಬಂದೋಬಸ್ತ್ ನೀಡಿದ್ದರು. ಕುಶಾಲನಗರದ ಹಿಲಾಲ್ ಮಾಸೀದಿ ಧರ್ಮಗುರುಗಳಾದ ಶಾಫಿ ಫೈಜಿ಼, ಹಿಲಾಲ್ ಮಸೀದಿ ಅಧ್ಯಕ್ಷರಾದ ರಫೀಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ಮಾತನಾಡಿ, ಹಬ್ಬದ ಪ್ರಾಮುಖ್ಯತೆ ಬಗ್ಗೆ ವಿವರಿಸಿ, ಬಕ್ರೀದ್ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭ ಕಮಿಟಿ ಪದಾಧಿಕಾರಿಗಳು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ನ ಸದಸ್ಯರು ಹಾಗೂ ಇನ್ನಿತರರು ಇದ್ದರು.
