ಕುಶಾಲನಗರ : ವಿವೇಕಾನಂದ ಪದವಿ ಪೂರ್ವ ಕಾಲೇಜು ವಿವೇಕೋತ್ಸವ 2025 : ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು : ಡಾ.ಪುತ್ತೂರಾಯ

ಕುಶಾಲನಗರ : ವಿವೇಕಾನಂದ ಪದವಿ ಪೂರ್ವ ಕಾಲೇಜು ವಿವೇಕೋತ್ಸವ 2025 : ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು :  ಡಾ.ಪುತ್ತೂರಾಯ

ಕುಶಾಲನಗರ : ವಿದ್ಯಾರ್ಥಿಗಳು ಶಿಸ್ತು,ಸಂಯಮ ಹಾಗೂ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯ ಹೇಳಿದರು. ಪಟ್ಟಣದ ಬೈಚನಹಳ್ಳಿಯಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿವೇಕೋತ್ಸವ 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ನಿರ್ಣಾಯಕ ಘಟ್ಟವಾಗಿದ್ದು, ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಅಧ್ಯಯನಶೀಲತೆ ಕೈಗೊಂಡಲ್ಲಿ ಖಂಡಿತ ತಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು ನಿರಂತರ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ಪುಸ್ತಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಶಿಸ್ತು ಬದ್ದ,ಶೀಲವಂತ ವಿದ್ಯಾರ್ಥಿಗಳೆ ಕಾಲೇಜಿನ ಆಧಾರ ಸ್ತಂಭವಾಗಿದೆ ಎಂದರು.ಸಮಾಜ ಸೇವೆ ಎಂದು ತಿಳಿದು ಶಿಕ್ಷಣ ಸಂಸ್ಥೆ ನಡೆಸಬೇಕು.ಯಾರು ಬೇಕಾದರೂ ವಿದ್ಯಾರ್ಥಿ, ಶಿಕ್ಷಕರು ಆಗಬಹುದು ಆದರೆ.ಎಲ್ಲರೂ ಸಂಸ್ಥಾಪಕರಾಗಲು ಸಾಧ್ಯವಿಲ್ಲ.ಅದಕ್ಕೆ ಯೋಗವು‌ ಬೇಕು, ಯೋಗ್ಯತೆಯು ಬೇಕು ಎಂದರು.ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸಿದರೆ ಎಂತಹ ವಿದ್ಯಾರ್ಥಿಯನ್ನು ಸರಿದಾರಿಗೆ ತಂದು ಮಾದರಿ ವಿದ್ಯಾರ್ಥಿಯಾಗಿ ರೂಪಿಸಲು ಸಾಧ್ಯ ಎಂದರು.

ಆಂಗ್ಲ ಪ್ರಾಧ್ಯಾಪಕ ಡಾ.ಎಚ್.ಆರ್.ಪಾಂಡುರಂಗ ಮಾತನಾಡಿ,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸುಗಳಿಲು ಸಾಧ್ಯ. ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹಾಗೂ ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಉತ್ತಮ ಜ್ಞಾನ ಹಾಗೂ ಕೌಶಲ್ಯದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

 ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, 2004 ರಲ್ಲಿ ಆರಂಭ ಈ ವಿದ್ಯಾಸಂಸ್ಥೆ ಇಂದು ಬೃಹತ್ ಆಲದಮರದಂತೆ ಬೆಳೆದು ನಿಂತಿದೆ.ವಿದ್ಯಾದಾನ ಇತ್ತೀಚಿನ ದಿನಗಳಲ್ಲಿ ಸುಲಭದ ಕೆಲಸವಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅವರ ಭವಿಷ್ಯ ರೂಪಿಸಬೇಕಾದ ಜವಬ್ದಾರಿ ಹಾಗೂ ಹೊಣೆಗಾರಿಕೆ ಇದೆ ಎಂದರು.

ವಿವೇಕಾನಂದ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವೇಕಾನಂದ ವಿದ್ಯಾಸಂಸ್ಥೆ ಕೋಶಾಧಿಕಾರಿ ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಅಮಿನ್, ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರರೇಷ್ಮ, ಎಂಜಿಎಂ ಕಾಲೇಜು ಪ್ರಾಂಶುಪಾಲೆ ಲಿಖಿತ ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿತು.