ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಗೆ ಚಾಲನೆ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕೊಡಗಿನ ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ವಲಿಯುಲ್ಲಾಹಿ,ಸಯ್ಯಿದ್ ಹಸನ್ ಸಖಾಫ್ ಹಳ್ರಮಿ ಹಾಗೂ ಇತರ ಮಹಾನುಭಾವರ ಉರೂಸ್ ಸಮಾರಂಭಕ್ಕೆ ಶುಕ್ರವಾರ ಗಣ್ಯರು ಶ್ರದ್ಧಾಭಕ್ತಿಯ ಚಾಲನೆ ನೀಡಿದರು.
ಎಮ್ಮೆಮಾಡುವಿನಲ್ಲಿ ಶುಕ್ರವಾರ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಅಬ್ದುಲ್ಲಾ ಫೈಝಿ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಾಇಬ್ ಖಾಝಿ ಅಬ್ದುಲ್ಲಾ ಫೈಝಿ ಉದ್ಘಾಟಿಸಿ ಮಾತನಾಡಿ ಉರೂಸ್ ಕಾರ್ಯಕ್ರಮ ಆಚರಣೆ ಎಂಬುದು ಮಹಾತ್ಮರಾದ ಅಲ್ಲಾಹುವಿನ ಔಲಿಯಾಗಳನ್ನು ಗೌರವಿಸಿ ಆಧರಿಸುವ ಒಂದು ಪುಣ್ಯ ಕಾರ್ಯವಾಗಿದೆ.ಔಲಿಯಾಗಳನ್ನು ಮುಂದಿಟ್ಟು ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರೆ ಅದಕ್ಕೆ ಪ್ರತಿಫಲ ಸಿಗಲಿದೆ.ಆದ್ದರಿಂದ ಎಲ್ಲರಿಗೂ ಉರೂಸ್ ಆಚರಣೆಯಲ್ಲಿ ಸಾಮೂಹಿಕ ಪ್ರಾಥನೆ ನೆರವೇರಿಸಲು ಅವಕಾಶ ಕಲ್ಪಿಸುವ ಒಂದು ಪುಣ್ಯ ಕಾರ್ಯವಾಗಿದೆ ಉರೂಸ್ ಎಂದರು.
ಮೊಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಹಾಗೂ ಅಬು ಸಹೀದ್ ಹುಸೈನ್ ಮೌಲವಿ ಕುಂಜಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿಅವರು ಮುಖ್ಯ ಪ್ರಭಾಷಣ ನಡೆಸಿದರು.
ಉರೂಸ್ ಕಾರ್ಯಕ್ರಮದ ಅಂಗವಾಗಿಏ.17ರಿಂದ24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಏ.20ರಂದು ಸೋಮವಾರ ಮದ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು,ರಾಜಕೀಯ ನೇತಾರರು,ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಅಧಿಕಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲಿದ್ದು ಸೋಮವಾರ ಸಂಜೆ 4 ರಿಂದ 6 ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದೆ. ಏ.24ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷರಾದ ಚಂಬರಂಡ ಮಾಹಿನ್,ಮಸೀದಿಯ ಮುದರ್ರಿಸ್ ಹಂಝ ಸಖಾಫಿ,ಎಮ್ಮೆಮಾಡು ಜಮಾಅತ್ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಸಖಾಫಿ,ಅಯ್ಯಂಗೇರಿ ಜಮಾಅತ್n ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ತಂಙಳ್, ಶಹೀದಿಯ ಅನಾಥಯದ ಅಧ್ಯಕ್ಷ ಶಾದುಲಿ ಹಾಜಿ,ಕಾರ್ಯದರ್ಶಿ ಮೊಯ್ದು ಕುಂಞಿ, ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ,ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಉಸ್ಮಾನ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಮೂಸ ಹಾಜಿ, ಹಸೈನಾರ್ ಹಾಜಿ, ಹಂಝ ಮುಸ್ಲಿಯಾರ್,ಜಮಾಅತ್ ಕಾರ್ಯದರ್ಶಿ ಸಯ್ಯಿದ್ ಝಕರಿಯ ತಂಙಳ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಶಹೀದಿಯ ಅನಾಥಾಲಯದ ಪದಾಧಿಕಾರಿಗಳು, ರಿಫಾಹಿಯಾ ದಫ್ ಸಂಘದ ಪದಾಧಿಕಾರಿಗಳು, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು,ಊರಿನ ಹಿರಿಯರು,ಮತ್ತಿತರ ಗಣ್ಯವ್ಯಕ್ತಿಗಳು,ಗ್ರಾಮಸ್ಥರು ಹಾಜರಿದ್ದರು.
ಹಂಝ ಸಖಾಫಿ ಪ್ರಾರ್ಥಿಸಿ, ಸಯ್ಯಿದ್ ಝಕರಿಯ ತಂಙಳ್ ಸ್ವಾಗತಿಸಿ, ಸುಲೈಮಾನ್ ಸಖಾಫಿ ವಂದಿಸಿದರು.
