ಕುಶಾಲನಗರದಲ್ಲಿ ಕೆಜಿವಿಎಸ್ ವತಿಯಿಂದ ವೈಜ್ಞಾನಿಕ ಮನೋಭಾವ ಕುರಿತು ಉಪನ್ಯಾಸ

ಕುಶಾಲನಗರದಲ್ಲಿ ಕೆಜಿವಿಎಸ್ ವತಿಯಿಂದ ವೈಜ್ಞಾನಿಕ ಮನೋಭಾವ ಕುರಿತು ಉಪನ್ಯಾಸ

ಕುಶಾಲನಗರ, ಮೇ.17: ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕ ಪ್ರಜ್ಞೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಮೆ.ನಾ.ವೆಂಕಟನಾಯಕ್ ಭಾನುವಾರ ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜಿ.ವಿ.ಎಸ್) ಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಪಟ್ಟಣದ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ "ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ" ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವೈಚಾರಿಕತೆ ಬೆಳೆಸುವ ಮೂಲಕ ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳನ್ನು ನಿರ್ಮೂಲನ ಮಾಡಲು ಪಣ ತೊಡಬೇಕು ಎಂದರು.

ಕ್ರಾಂತಿಕಾರಿ ಬಸವಣ್ಣನವರು 12 ನೇ ಶತಮಾನದಲ್ಲಿ ರಚಿಸಿದ ವಚನಗಳಲ್ಲಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಕಾವ್ಯಗಳಲ್ಲಿ ಅಂಧಃಶ್ರದ್ಧೆ ತೊಲಗಿಸಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳುವ ವೈಚಾರಿಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂದರು. ಸಮಾಜದಲ್ಲಿ ವೈಚಾರಿಕತೆ ಬೆಳೆಸುವ ಕುರಿತು ಸಭಿಕರೊಂದಿಗೆ ಸಂವಾದ ನಡೆಸಿದ ಮೆ.ನಾ.ವೆಂಕಟನಾಯಕ್, ಸಮಾಜದಲ್ಲಿ ನಾಗರಿಕತೆ ‌ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬದುಕುವ ಮೂಲಕ ಮೌಢ್ಯದ ವಿರುದ್ಧ ಧ್ವನಿಯಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದರು.

ಸಮಾಜದಲ್ಲಿ ಅನಾದಿಕಾಲ ದಿಂದಲೂ ಬೆಳೆದು ಬಂದಿರುವ ಮೂಢನಂಬಿಕೆಗಳಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನರಲ್ಲೂ ಜಾಗೃತಿ ‌ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

 ಅಧ್ಯಕ್ಷತೆ ವಹಿಸಿದ್ದ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಿ.ಮಂಜುನಾಥ್ ಮಾತನಾಡಿ, ಯುವ ಜನಾಂಗ ಎಚ್ಚೆತ್ತು ಮೌಢ್ಯದ ವಿರುದ್ಧ ಹೋರಾಟ ನಡೆಸಿ ಆಧುನಿಕತೆಗೆ ಅನುಗುಣವಾಗಿ ಬದುಕುವ ಕಲೆ ಬೆಳೆಸಿಕೊಳ್ಳಬೇಕು ಎಂದರು.

ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷೆ ಎಂ.ಟಿ. ಸರಳಕುಮಾರಿ ಮಾತನಾಡಿ, ಜನರನ್ನು ಬಾಧಿಸುತ್ತಿರುವ ಮೌಢ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎನ್.ಎಸ್.ಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದರು. ಸಂವಾದದಲ್ಲಿ ಎಂ.ಎಸ್.ಕೇಶವಮೂರ್ತಿ, ಎಂ.ಜಿಮಾಚಯ್ಯ, ಎಚ್.ಎನ್.ಆಕಾಶ್, ಕೆ.ಎನ್.ಸುಹೈಬ್, ಪ್ರಮೋದ್, ರಾಜು ಇತರರು ಇದ್ದರು.