ಫಿಟ್ ಇಂಡಿಯಾ ಮೂಲಕ ಎಲ್ಲೆಡೆ ಆರೋಗ್ಯ ಹೆಚ್ಚಾಗಲಿ: ಯದುವೀರ್ ಒಡೆಯರ್ | ಕಿಡ್ಸ್ ಸೈಕ್ಲೊಥಾನ್ಗೆ ಮೈಸೂರು-ಕೊಡಗು ಸಂಸದರಿಂದ ಚಾಲನೆ
ಮೈಸೂರು, ನ.23:ಇಡೀ ದೇಶದ ನಾಗರಿಕರು ಆರೋಗ್ಯವಾಗಿರಬೇಕು ಎಂಬ ಬಹು ಮುಖ್ಯ ಆಶಯದೊಂದಿಗೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಆರಂಭಿಸಿರುವ ಫಿಟ್ ಇಂಡಿಯಾ ಆಂದೋಲನಕ್ಕೆ ಮೈಸೂರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಕ್ರೀಡೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಸಂಸದರ ಕ್ರೀಡೋತ್ಸವ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಫೋನಿಕ್ಸ್ ಇಂಟರ್ನ್ಯಾಷನಲ್ ಅಕಾಡೆಮಿ, ಸೈಕ್ಲೋಪೀಡಿಯಾ, ಫನ್ ಪ್ಯಾಲೇಸ್, ಸನ್ಪ್ಯೂರ್, ಲಿಟ್ಲ್ ಎಲ್ಲಿ, ಬುಕ್ಸ್ ಅಂಡ್ ಬ್ರೇನ್ಸ್ ಜಂಟಿ ಸಹಯೋಗದಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಆಯೋಜಿಸಲಾದ ಕಿಡ್ಸ್ ಸೈಕ್ಲೊಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಫಿಟ್ ಇಂಡಿಯಾ ನಮ್ಮ ಕೇಂದ್ರ ಸರಕಾರದ ಒದ ಮಹತ್ವಾಕಾಂಕ್ಷಿಯ ಆಂದೋಲನವಾಗಿದೆ.
ಕಿರಿಯ ವಯಸ್ಸಿನಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದ ಪ್ರಧಾನಮಂತ್ರಿಗಳ ಆಶಯದಂತೆ ನಮ್ಮ ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿವಿಧ ಕ್ರೀಡೋತ್ಸವ ಆಯೋಜಿಸುತ್ತಿದ್ದೇವೆ ಎಂದರು. ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಧ್ಯೇಯ. ಕಿರಿಯ ವಯಸ್ಸಿನಿಂದಲೇ ಕ್ರೀಡೆಗೆ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಪಸರಿಸುವಂತಾಗಲಿದೆ. ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಗಾಧ ಅವಕಾಶವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರಿಗೆ ವೇದಿಕೆಯನ್ನು ಕಲ್ಪಿಸಲು ನಾನು ಬದ್ಧನಾಗಿದ್ದೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಸಂಸದರ ಕ್ರೀಡೋತ್ಸವದಲ್ಲಿ ಮುಂದಿನ ದಿನಗಳಲ್ಲಿ ಹಗ್ಗ ಜಗ್ಗಾಟ ಕ್ರೀಡೆ ಆಯೋಜಿಸಲಾಗುವುದು. ನಮ್ಮ ಮೈಸೂರಿನಲ್ಲಿ ರಾಜರ ಕಾಲದಿಂದಲೂ ಕುಸ್ತಿಗೆ ಹೆಸರುವಾಸಿ. ಕುಸ್ತಿಗೆ ತವರೂರು ಆಗಿದೆ. ಹೀಗಾಗಿ ಕುಸ್ತಿ ಪಂದ್ಯಾವಳಿ ಕೂಡ ಆಯೋಜಿಸಲಾಗುವುದು ಎಂದರು. ಕೊಡಗಿನಲ್ಲಿ ಹಾಕಿ ಮತ್ತು ವಾಲಿಬಾಲ್ ಕ್ರೀಡಾಕೂಟ ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
6 ವರ್ಷ, 8 ವರ್ಷ ಒಳಪಟ್ಟವರ ಬಾಲಕ ಮತ್ತು ಬಾಲಕಿಯರ ವಿಭಾಗ, 10 ವರ್ಷ ಮತ್ತು 12 ವರ್ಷ ಒಳಪಟ್ಟವರು ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ನಾಲ್ಕು ವಿಭಾಗಗಳಲ್ಲಿ ವಿಜೇತರಾದ ಮೂವರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರವನ್ನೂ ವಿತರಿಸಲಾಯಿತು.
ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಎನ್. ಲೋಕೇಶ್, ಜಿಲ್ಲಾ ಸೈಕ್ಲಿಂಗ್ ತರಬೇತುದಾರರು ಫರಿಯಾಲ್ ಜಮೇದಾರ್, ಗೌರವಾಧ್ಯಕ್ಷ ರಮೇಶ್ ನರಸಯ್ಯ ಹಾಗೂ ಇತರರು ಹಾಜರಿದ್ದರು.
ಫಲಿತಾಂಶ ಬಾಲಕಿಯರು 6 ವರ್ಷದೊಳಗಿನವರು: ಲಹರಿ ಪೂವಯ್ಯ (ಪ್ರಥಮ), ಖುಶಿ ಚೇತನ್ (ದ್ವಿತೀಯ), ಆನ್ಯಾ ಲೋಕೇಶ್ (ತೃತೀಯ). 8 ವರ್ಷದೊಳಗಿನವರು: ಚಾವಿ ರಾವ್ (ಪ್ರಥಮ), ವೆಂಬಾ ಪ್ರಕಾಶ್ (ದ್ವಿತೀಯ), ದಿಯಾ ಸೊಲಾಂಕಿ (ತೃತೀಯ).
10 ವರ್ಷದೊಳಗಿನವರು: ಕೆ.ಡಿ. ತಾಶಿ (ಪ್ರ), ನೈಜಶ್ರೀ (ದ್ವಿ), ಪೆಹಾಲ್ ಜೈನ್ (ತೃ). 12 ವರ್ಷದೊಳಗಿನವರು: ಇಮಯಾ ಪ್ರಕಾಶ್ (ಪ್ರ), ಆರ್ಕಾಸಿವೀಜ್ (ದ್ವಿ), ಎಂ. ಚಾರ್ವಿ (ತೃ).
ಬಾಲಕರ ವಿಭಾಗ 6 ವರ್ಷದೊಳಗಿನವರು: ಸ್ಕಂದಾ ಕೌಶಿಕ್ (ಪ್ರ),ಆರ್ಯನ್ ಸೂರ್ಯ (ದ್ವಿ), ಸಯ್ಯದ್ ಜುಹಾರುದ್ದಿನ್ ಖಿಲ್ಜಿ (ತೃ) 8 ವರ್ಷದೊಳಗಿನವರು: ಮೊಹಮ್ಮದ್ ಮೆಹ್ರಾನ್ (ಪ್ರ), ರಿಶಾಂಕ್ (ದ್ವಿ), ಸಯ್ಯದ್ ಜೈದುದ್ದೀನ್ ಖಿಲ್ಜಿ (ತೃ)
10 ವರ್ಷದೊಳಗಿನವರು: ರಿಶಬ್ ಕಾಂಡಾಗಾಲೆ (ಪ್ರ), ವಿಹಾನ್ ಮಂದಣ್ಣ (ದ್ವಿ), ಸವಿಯೊ ಪೌಲ್ (ತೃ) 12 ವರ್ಷದೊಳಗಿನವರು: ಜಸ್ಮಿತ್ ಯಶವಂತ್ ಪವಾರ್ (ಪ್ರ), ಜಿ. ಮೋಹಿತ್ ಪ್ರಸಾದ್ (ದ್ವಿ), ಗ್ಯಾನ್ ಗಣಪತಿ (ತೃ)