ಬಿರುಕು ಬಿಟ್ಟಿರುವ ತಡೆಗೋಡೆ ವೀಕ್ಷಿಸಿದ ಶಾಸಕ ಡಾ.ಮಂತರ್ ಗೌಡ: ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಶಾಸಕರು

ಬಿರುಕು ಬಿಟ್ಟಿರುವ ತಡೆಗೋಡೆ ವೀಕ್ಷಿಸಿದ ಶಾಸಕ ಡಾ.ಮಂತರ್ ಗೌಡ:  ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಶಾಸಕರು

ಮಡಿಕೇರಿ-ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಬಿಟ್ಟಿರುವ ತಡೆಗೋಡೆಯನ್ನು ಶಾಸಕರಾದ ಡಾ.ಮಂತರ್ ಗೌಡ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು. ಬಿರುಕು ಬಿಟ್ಟಿರುವ ತಡೆಗೋಡೆ ಕುಸಿದು ಬಿದ್ದರೆ ಇಡೀ ಹೆದ್ದಾರಿಯೇ ಬಂದ್ ಆಗಲಿದೆ. ಆದ್ದರಿಂದ ತಜ್ಞ ಎಂಜಿನಿಯರ್‌ಗಳನ್ನು ಆಹ್ವಾನಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹೆದ್ದಾರಿ ವಿಭಾಗದ ಎಂಜಿನಿಯರ್‌ಗೆ ಶಾಸಕರು ಸೂಚಿಸಿದರು. ಹೆದ್ದಾರಿ ಸುರಕ್ಷತೆ ಸಂಬಂಧಿಸಿದಂತೆ ಟಾರ್ಪಲ್ ಹೊದಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಶಾಸಕರು ನಿರ್ದೇಶನ ನೀಡಿದರು.

ಈ ಬಾರಿ ಮೇ ತಿಂಗಳಿನಿಂದಲೇ ದೊಡ್ಡ ಮಳೆ ಆರಂಭವಾಯಿತು. ಮುಂದಿನ ನವೆಂಬರ್ ವರೆಗೂ ಮಳೆ ಇರುವ ಸಾಧ್ಯತೆ ಇದೆ. ಆದ್ದರಿಂದ ಹೆದ್ದಾರಿ ಸುರಕ್ಷತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ತಜ್ಞ ಎಂಜಿನಿಯರ್‌ಗಳನ್ನು ಆಹ್ವಾನಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಸಾರ್ವಜನಿಕರ ಓಡಾಟ ಮತ್ತು ಸುರಕ್ಷತೆ ಅತೀ ಮುಖ್ಯವಾಗಿದೆ. ಜೊತೆಗೆ ಇಲ್ಲಿನ ೫ ಕುಟುಂಬಗಳ ಸುರಕ್ಷತೆಯೂ ಸಹ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಡಾ.ಮಂತರ್ ಗೌಡ ಅವರು ತಿಳಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ೨೦೨೧-೨೨ ರಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ಸಮೀಪದಲ್ಲಿ ೫ ಕುಟುಂಬಗಳಿದ್ದು, ತಾತ್ಕಾಲಿಕವಾಗಿ ಸ್ಥಳಾಂತರವಾಗಿದ್ದು, ಹೆದ್ದಾರಿ ಸುರಕ್ಷತೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು. ತಹಶೀಲ್ದಾರ್ ಶ್ರೀಧರ, ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್, ಪೌರಾಯುಕ್ತರಾದ ರಮೇಶ್, ಜಿ.ಪಂ.ಎಂಜಿನಿಯರ್‌ಗಳು, ಸ್ಥಳೀಯರು ಇತರರು ಇದ್ದರು.