ಮಡಿಕೇರಿ; ಏ.01ರಿಂದ ವಾಂಡರ‍್ಸ್ ಬೇಸಿಗೆ ಶಿಬಿರ

ಮಡಿಕೇರಿ; ಏ.01ರಿಂದ  ವಾಂಡರ‍್ಸ್ ಬೇಸಿಗೆ ಶಿಬಿರ

ಮಡಿಕೇರಿ,ಮಾ.30; ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೊಡಗಿನ ಕ್ರೀಡಾ ಕ್ಷೇತ್ರದ ದ್ರೋಣಾಚಾರ್ಯ ದಿ. ಸಿ.ವಿ. ಶಂಕರ್ ಸ್ವಾಮಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರಲಾಗುತ್ತಿರುವ 32ನೇ ವರ್ಷದ ಮಕ್ಕಳ ಉಚಿತ ಬೇಸಿಗೆ ಶಿಬಿರ ಏ.1ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಅನೌಪಚಾರಿಕವಾಗಿ ಶಿಬಿರ ಆರಂಭಗೊಂಡಿದ್ದು, ಏ. 1ರಂದು ಬೆಳಿಗ್ಗೆ 8.30 ಗಂಟೆಗೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. 

ವಾಂಡರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಮುಲ್ಲೇರ ಕಾವೇರಪ್ಪ ಉದ್ಘಾಟಿಸುವರು. ಅತಿಥಿಗಳಾಗಿ ಹಿರಿಯ ಹಾಕಿ ಆಟಗಾರ ಪಾಡೆಯಂಡ ಮಣಿಮೇದಪ್ಪ ಭಾಗವಹಿಸುವರು. ಶಿಬಿರದಲ್ಲಿ ನುರಿತ ತರಬೇತುದಾರರಿಂದ ಯೋಗ, ಹಾಕಿ ಹಾಗೂ ಅಥ್ಲೆಟಿಕ್ಸ್ನಲ್ಲಿ ತರಬೇತಿ ನೀಡಲಾಗುವದು.

ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ 6.30ಕ್ಕೆ ಶಿಬಿರ ಆರಂಭಗೊಳ್ಳಲಿದ್ದು, ಭಾಗವಹಿಸುವ ಮಕ್ಕಳಿಗೆ ಹಾಲು, ಮೊಟ್ಟೆ, ಬ್ರೆಡ್, ಬಾಳೆಹಣ್ಣು ನೀಡಲಾಗುವದು ಎಂದು ಶಿಬಿರದ ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಲಬ್ ಪದಾಧಿಕಾರಿಗಳಾದ ಕುಡೆಕಲ್ ಸಂತೋಷ್(9972538584), ಬೊಪ್ಪಂಡ ಶ್ಯಾಂ ಪೂಣಚ್ಚ(9448278081) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.