ಹುಣ್ಣಿಮೆಯ ಅಂಗವಾಗಿ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಶ್ರೀ ಕ್ಷೇತ್ರಧರ್ಮಸ್ಥಳ ಸಂಘದಿಂದ ಮಹಾಆರತಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಹುಣ್ಣಿಮೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ವತಿಯಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಮಹಾ ಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು. ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ್ ಅವರು ಮಾತನಾಡಿ ಪವಿತ್ರ ನದಿ ಕಾವೇರಿಯ ಸ್ವಚ್ಛತೆಯನ್ನು ಕಾಪಾಡಿ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಜನರಿಗೆ ನದಿಯ ಸ್ವಚ್ಛತೆಯ ಅರಿವು ಮೂಡಿಸುತ್ತಾ ಬಂದಿದ್ದೇವೆ. ಎಲ್ಲರೂ ಕೂಡ ತಮ್ಮ ವ್ಯಾಪ್ತಿಯಲ್ಲಿರುವ ನದಿಗಳಿಗೆ ತ್ಯಾಜ್ಯಗಳನ್ನು ಹಾಕದೆ ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಆಯೋಜಿತ ಕಾರ್ಯಕ್ರಮದಲ್ಲಿ ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಧರ್ಮಸ್ಥಳ ಸಂಘದ ಕೃಷಿ ಅಧಿಕಾರಿ ಅಶ್ವತ್, ಮೇಲ್ವಿಚಾರಕರಾದ ಸುನಿಲ್, ಧರ್ಮಸ್ಥಳ ಸಂಘದ ನಾಪೋಕ್ಲು ಸುಭಾಷ್ ನಗರ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ, ಸೇವಾ ಪ್ರತಿನಿಧಿ ಉಮಾ ಲಕ್ಷ್ಮಿ, ಸಂಘದ ಸದಸ್ಯರಾದ ದಿಲೀಶ್, ಶಂಕರ, ಮಾಯಿಲಪ್ಪ, ಶರವಣ, ಪ್ರತಿಮಾ, ರೀಟಾ ಸುನಿತಾ ಲಕ್ಷ್ಮಿ ರಾಜೇಶ್ವರಿ ಮತ್ತಿತರರು ಹಾಜರಿದ್ದರು.