ಮೋದಿ-ನಿತೀಶ್ ಜೋಡಿಯ ಜುಗಲ್ಬಂದಿಗೆ ಮಹಾಘಟಬಂಧನ್ ಧೂಳೀಪಟ: ಯದುವೀರ್ ಒಡೆಯರ್
ಮೈಸೂರು, ನ.14: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಭಿವೃದ್ಧಿಪರ ಆಡಳಿತಕ್ಕೆ ಬಿಹಾರದ ಜನತೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜಯದ ಹಾರ ತೊಡಿಸಿದ್ದಾರೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು, ಬಿಜೆಪಿ ನೇತೃತ್ವದ ಮೈತ್ರಿಕೂಟದ ದಾಖಲೆಯ ಗೆಲುವು ಸ್ಮರಣೀಯ ಎಂದು ಹೇಳಿದ್ದಾರೆ. ವಿಕಸಿತ ಭಾರತಕ್ಕೆ ಮೋದಿ ಅವರ ದೃಢ ಸಂಕಲ್ಪ ಮತ್ತು ಬಿಹಾರದಲ್ಲಿ ಕೈಗೊಂಡ ಅಭಿವೃದ್ಧಿಪರ ಯೋಜನೆಗಳು ಬಿಜೆಪಿಗೆ ಕೈ ಹಿಡಿದಿವೆ. ಬಿಜೆಪಿ ಪರವಾಗಿ ನಾನು ಬಿಹಾರ ಜನರನ್ನು ಅಭಿನಂದಿಸುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮತಚೋರಿ ಎಂಬ ಸುಳ್ಳಿನ ಕಥೆಯನ್ನು ಹೇಳಿಕೊಂಡು ಕಾಲ ಕಳೆಯುತ್ತಿದೆ. ಆದರೆ ಬಿಜೆಪಿ-ಜೆಡಿಯು ಜನಪರ ಕೆಲಸಗಳನ್ನು ಕೈಗೊಳ್ಳುತ್ತಿದೆ. ಇದೇ ನಮ್ಮ ಮೈತ್ರಿಕೂಟಕ್ಕೆ ಮಹಾ ಘಟಬಂಧನಕ್ಕೆ ಇರುವ ವ್ಯತ್ಯಾಸ ಎಂದು ಯದುವೀರ್ ತಿಳಿಸಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ಪರ ಅಲೆ ಹೇಗಿದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತದೆ. ನಮ್ಮ ಬಿಜೆಪಿ ಸರ್ಕಾರದಿಂದ ದೇಶಕ್ಕೆ ಇನ್ನಷ್ಟು ಹೊಸ ಹೊಸ ಕೊಡುಗೆಗಳು ದೊರೆಯಲಿದೆ. ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಕೇಸರಿ ಅಲೆ ಏಳಲಿದೆ ಎಂದು ಸಂಸದ ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.