ಮಾಲೂರು ಮರು ಮತ ಎಣಿಕೆ ಪೂರ್ಣ; ನಗುಮುಖದಿಂದ ಹೊರಬಂದ ನಂಜೇಗೌಡ : ಅಧಿಕೃತ ಪ್ರಕಟಣೆ ಇನ್ನೂ ಬಾಕಿ, ಫಲಿತಾಂಶದಲ್ಲಿ ಬದಲಾವಣೆ ಇಲ್ಲ!
ಕೋಲಾರ, ನ.11: ರಾಜ್ಯದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಮಂಗಳವಾರ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಶಾಂತವಾಗಿ ಪೂರ್ಣಗೊಂಡಿದ್ದು, ಹಿಂದಿನ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ಸುಮಾರು 8 ಗಂಟೆಗೆ ಎಣಿಕೆ ಕೇಂದ್ರದಿಂದ ಹೊರಬಂದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರು, “ಮರು ಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ. ನಾವು ಅಂಬೇಡ್ಕರ್ ಸಂವಿಧಾನದಲ್ಲಿ ವಿಶ್ವಾಸವಿಟ್ಟಿದ್ದೇವೆ, ನ್ಯಾಯ ದೊರೆತಿದೆ,” ಎಂದು ನಗುವಿನೊಂದಿಗೆ ಹೇಳಿದರು.
ಇನ್ನೊಂದೆಡೆ, ಮರು ಮತ ಎಣಿಕೆ ಪ್ರಕ್ರಿಯೆಯ ಕುರಿತು ಸೋತ ಅಭ್ಯರ್ಥಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಮಂಜುನಾಥಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, “ಎಣಿಕೆಯ ವಿಷಯವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು,” ಎಂದರು. ಆದರೆ, “ಗೆದ್ದವರಿಗೂ ಅಭಿನಂದನೆಗಳು” ಎಂದು ರಾಜಕೀಯ ಸೌಜನ್ಯ ಕಾಪಾಡಿದರು.
ಮರು ಮತ ಎಣಿಕೆಯ ನಂತರವೂ ನಂಜೇಗೌಡರ ಗೆಲುವು ಅಬಾಧಿತವಾಗಿರುವುದು ಸ್ಪಷ್ಟವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮರು ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿದೆ. ಹೀಗಾಗಿ ಅಧಿಕೃತ ಫಲಿತಾಂಶ ಪ್ರಕಟಣೆ ಇನ್ನೂ ಬಾಕಿಯೇ ಇದೆ.