ಕುಂದಾಪುರದಿಂದ ದರ್ಗಾ ಪ್ರವಾಸಕ್ಕೆ ಬಂದ ವ್ಯಕ್ತಿ ಎಮ್ಮೆಮಾಡುವಿನಲ್ಲಿ ನಾಪತ್ತೆ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಉಡುಪಿ ಜಿಲ್ಲೆಯ ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆಂದು ತೆರಳಿದ ವ್ಯಕ್ತಿಯೊಬ್ಬರು ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ಕಾಣೆಯಾಗಿರುವ ಬಗ್ಗೆ ವಾರದಿಯಾಗಿದ್ದು ನಾಪೋಕ್ಲು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುರ್ಕಂಜೆ ಗ್ರಾಮದ ನಿವಾಸಿ ಹಸೈನಾರ್ ಸಾಹೇಬ್ (65)ಇವರು 13-4-2026ರಂದು ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆ ತೆರಳಿದ್ದರು.ದಿನಾಂಕ 15-4-2026ರಂದು ರಾತ್ರಿ 11.30ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದಾರೆ.
ಎಮ್ಮೆಮಾಡುವಿನಲ್ಲಿ ರೂಮ್ ಸಿಗದ ಕಾರಣ ಮಸೀದಿಯ ಆವರಣದಲ್ಲಿ ಹಸೈನಾರ್ ಮಲಗಿದ್ದರು ಎನ್ನಲಾಗಿದೆ.ಮಲಗಿದ್ದ ಜಾಗದಲ್ಲಿ ಹಸೈನಾರ್ ಅವರು ಕಾಣದೆ ಇದ್ದು ಸಂಬಂಧಿಕರು ಇವರನ್ನು ಹುಡುಕಾಡಿದ್ದಾರೆ.ಬಳಿಕ ಮಸೀದಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಮಸೀದಿಯ ಮುಖ್ಯ ದ್ವಾರದ ಗೇಟಿನ ಮುಖಾಂತರ ಹಸೈನಾರ್ ಹೊರಗಡೆ ತೆರಳುವ ದೃಷ್ಯ ಸೆರೆಯಾಗಿದೆ.
ಹಸೈನಾರ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು ಎಮ್ಮೆಮಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ತಿಳಿದು ಬಂದಿದೆ.ಬಳಿಕ ದಿನಾಂಕ 16-4-2026ರಂದು ಸಂಬಂಧಿಕರು ನಾಪೋಕ್ಲು ಠಾಣೆಗೆ ಹಸೈನಾರ್ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಹೈಸೈನಾರ್ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ನಾಪತ್ತೆಯಾಗಿರುವ ಹಸೈನಾರ್ 5.5 ಅಡಿ ಎತ್ತರವಿದ್ದು,ಕಪ್ಪು ಬಿಳಿ ಕೂದಲು, ಎಣ್ಣೆ ಕಪ್ಪು ಮೈಬಣ್ಣ, ಆಕಾಶ ನೀಲಿ ಬಣ್ಣದ ತುಂಬು ತೋಳಿನ ಶರ್ಟು,ನೀಲಿ ಪಿಂಕ್ ಬಣ್ಣದ ಚೌಕುಳಿ ಪಂಚೆ ಧರಿಸಿರುತ್ತಾರೆ. ಇವರು ಕನ್ನಡ ಬ್ಯಾರಿ ಭಾಷೆ ಮಾತನಾಡುವವರಾಗಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸಾರ್ವಜನಿಕರು ತಕ್ಷಣ ನಾಪೋಕ್ಲು ಪೊಲೀಸ್ ಠಾಣೆ ಅಥವಾ ಕೊಡಗು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ. Mob =9480804948 08272228330