ಡ್ರಾಪ್‌ ನೀಡುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ

ಡ್ರಾಪ್‌ ನೀಡುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ
Photo credit: TV09 (ಪ್ರಾತಿನಿಧಿಕ ಚಿತ್ರ)

ಹಾವೇರಿ, ಡಿ.29: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ತಿರ್ಲಾಪುರ ಕ್ರಾಸ್ ಬಳಿ ಡ್ರಾಪ್‌ ನೀಡುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಆರೋಪಿಯೊಬ್ಬ ಪರಾರಿಯಾದ ಘಟನೆ ಸೋಮವಾರ ನಡೆದಿದೆ. ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು ₹3 ಲಕ್ಷವಾಗಿದ್ದು, ಸರದ ತೂಕ 29 ಗ್ರಾಂ ಎಂದು ತಿಳಿದುಬಂದಿದೆ.

ರತ್ನಾ ಬಣಕಾರ್‌ ಎಂಬ ಮಹಿಳೆ ಕುಮ್ಮೂರು ಕ್ರಾಸ್‌ನಿಂದ ಗುಮ್ಮನಹಳ್ಳಿಗೆ ತೆರಳಲು ಬೈಕ್ ಸವಾರನ ಬಳಿ ಡ್ರಾಪ್ ಕೇಳಿದ್ದರು. ಆರೋಪಿ ಮಾರ್ಗ ಮಧ್ಯೆ ತಿರ್ಲಾಪುರ ಕ್ರಾಸ್ ಬಳಿ ‘ಸಂಬಂಧಿಕರು ಬರುತ್ತಿದ್ದಾರೆ’ ಎಂದು ಹೇಳಿ ಮಹಿಳೆಯನ್ನು ಇಳಿಸಿದ್ದಾನೆ. ಈ ವೇಳೆ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಏಕಾಏಕಿ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಗುರುತು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ವಿಶೇಷ ಎಚ್ಚರ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.