ವಿಚ್ಛೇದಿತ ಹಾಗೂ ಒಬ್ಬಂಟಿ ಮಹಿಳೆಯರಿಗೆ ಮರುಮದುವೆಯ ಭರವಸೆ ನೀಡಿ ವಂಚನೆ ಮಾಡುತ್ತಿದ್ದವ ಆತ್ಮಹತ್ಯೆ

ವಿಚ್ಛೇದಿತ ಹಾಗೂ ಒಬ್ಬಂಟಿ ಮಹಿಳೆಯರಿಗೆ ಮರುಮದುವೆಯ ಭರವಸೆ ನೀಡಿ ವಂಚನೆ ಮಾಡುತ್ತಿದ್ದವ ಆತ್ಮಹತ್ಯೆ
Photo credit: TV09 (ಫೋಟೋ: ಮೃತ ಗಿರೀಶ್)

ಚಿಕ್ಕಬಳ್ಳಾಪುರ: ವಿಚ್ಛೇದಿತ ಹಾಗೂ ಒಬ್ಬಂಟಿ ಮಹಿಳೆಯರಿಗೆ ಮರುಮದುವೆಯ ಭರವಸೆ ನೀಡಿ ವಂಚನೆ ಮಾಡುತ್ತಿದ್ದ ಪ್ರಕರಣದ ಆರೋಪಿ ಸಿ.ಎಂ. ಗಿರೀಶ್ ನೇಣಿಗೆ ಶರಣಾದ ಘಟನೆ ಚಿಂತಾಮಣಿಯ ಕನ್ನಂಪಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ದೂರುಗಳ ಭಯದಿಂದ ಆತ್ಮಹತ್ಯೆಗೆ ಮಾಡಿಕೊಂಡ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್ ಮೂಲಕ ಪರಿಚಯ ಹೊಂದಿ ಮಹಿಳೆಯರ ವಿಶ್ವಾಸ ದುರುಪಯೋಗಪಡಿಸಿಕೊಂಡು ಹಣ, ಆಭರಣ ಹಾಗೂ ಲೈಂಗಿಕ ಶೋಷಣೆ ನಡೆಸುತ್ತಿದ್ದನೆಂಬ ಆರೋಪ ಗಿರೀಶ್ ವಿರುದ್ಧ ಕೇಳಿಬಂದಿತ್ತು. ಸಾಯಿಸುದೀಪ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ಗಿರೀಶ್ ನಂದಗುಡಿ, ಬೆಂಗಳೂರು, ಚಿಕ್ಕಬಳ್ಳಾಪುರ, ಕೆ.ಆರ್.ಪುರಂ ಮತ್ತು ಬಂಗಾರಪೇಟೆ ಮೂಲದ ಐದಕ್ಕಿಂತ ಹೆಚ್ಚು ಮಹಿಳೆಯರನ್ನು ವಂಚಿಸಿದ್ದಾನೆಂದು ಸಂತ್ರಸ್ತೆಯರು ತಿಳಿಸಿದ್ದಾರೆ.

ಮರುಮದುವೆಯ ಹೆಸರಿನಲ್ಲಿ ಬೆಂಗಳೂರಿನ ಮಹಿಳೆಯಿಂದ 25 ಲಕ್ಷ ರೂ. ವಂಚಿಸಿದ್ದಾನೆ. ಚಿಕ್ಕಬಳ್ಳಾಪುರ ಮೂಲದ ಸರ್ಕಾರಿ ನೌಕರಿಯಾದ ಮಹಿಳೆಯಿಂದ 5 ಲಕ್ಷ ರೂ. ಪಡೆದು ಕಿರುಕುಳ ನೀಡಿದ್ದಾನೆ. ಕೆ.ಆರ್.ಪುರಂ ಮೂಲದ ಮತ್ತೊಬ್ಬರಿಂದ ಮಾಂಗಲ್ಯ ಚೈನ್ ಮತ್ತು ಕಿವಿಯೋಲೆ ಸೇರಿ 40 ಗ್ರಾಂ ಚಿನ್ನ ಪಡೆದುಕೊಂಡಿದ್ದಾನೆ. ನಂದಗುಡಿಯಲ್ಲಿ ಶ್ರೀಮಂತ ಯುವತಿಯನ್ನು ಮದುವೆಯಾಗಿ ಹಣಕ್ಕಾಗಿ ಪೀಡಿಸಿದ್ದಾನೆ. ಹಾಗೆಯೇ ಬಂಗಾರಪೇಟೆಯಲ್ಲಿ ಮತ್ತೊಬ್ಬಳಿಗೆ ನಿರಂತರ ಕಿರುಕುಳ ನೀಡಿದ್ದಾನೆಂಬ ದೂರೂ ದಾಖಲಾಗಿತ್ತು.

ಮೊನ್ನೆಯಷ್ಟೇ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ನಾಲ್ವರು ಮಹಿಳೆಯರು ದೂರು ಸಲ್ಲಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಬಲವಾಗಿದೆ. ತಿಂಗಳ ಹಿಂದೆ ಆತ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದಿದ್ದ ಮಾಹಿತಿಯೂ ಬಹಿರಂಗವಾಗಿದೆ.

ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಅವರ ಮುಂದಾಳತ್ವದಲ್ಲಿ ಸಂತ್ರಸ್ತೆಯರು ದೂರು ನೀಡಿದ್ದು, ಪ್ರಕರಣದ ಸಂಬಂಧ ಚಿಂತಾಮಣಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.