ಮಂಗಳೂರು | ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಆರೋಪಿ ಭರತ್ ಕುಮ್ಡೇಲು ನ್ಯಾಯಾಲಯಕ್ಕೆ ಶರಣು
ಮಂಗಳೂರು: ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಗಳ ಪ್ರಮುಖ ಆರೋಪಿ ಹಾಗೂ ಹಿಂದೂ ಸಂಘಟನೆಯ ಮುಖಂಡನಾಗಿರುವ ಭರತ್ ಕುಮ್ಡೇಲು ಶುಕ್ರವಾರ ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಮೂರು-ನಾಲ್ಕು ತಿಂಗಳಿನಿಂದ ವಿಚಾರಣೆಗೆ ಹಾಜರಾಗದಿದ್ದ ಕಾರಣ ಭರತ್ ಕುಮ್ಡೇಲು ವಿರುದ್ಧ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿತ್ತು. ಇತ್ತೀಚೆಗೆ ಕೋಕಾ ಕಾಯ್ದೆಯಡಿ (KCOCA) ಆತನ ವಿರುದ್ಧ ಹೊಸ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
2017ರ ಜೂನ್ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜಿನಪದವು ಗ್ರಾಮದಲ್ಲಿ ಎಸ್ಡಿಪಿಐ ಕಾರ್ಯಕರ್ತ ಹಾಗೂ ಆಟೋ ಚಾಲಕರಾಗಿದ್ದ ಮಹಮ್ಮದ್ ಅಶ್ರಫ್ ಕಲಾಯಿ ಅವರನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿತ್ತು. ಅಶ್ರಫ್ ಕಲಾಯಿ ಎಸ್ಡಿಪಿಐ ಅಮ್ಮುಂಜೆ ಘಟಕದ ಅಧ್ಯಕ್ಷರಾಗಿದ್ದರು. ಈ ಪ್ರಕರಣದಲ್ಲಿ ದಿವ್ಯರಾಜ್ ಹಾಗೂ ಭರತ್ ಕುಮ್ಡೇಲು ಪ್ರಮುಖ ಆರೋಪಿಗಳು ಎನ್ನಲಾಗಿದೆ.
ಇತ್ತೀಚಿಗೆ ಬಂಟ್ವಾಳ ತಾಲೂಕಿನ ಇರಾಕೋಡಿ ಪ್ರದೇಶದಲ್ಲಿ ಪಿಕಪ್ ವಾಹನ ಚಾಲಕರಾಗಿದ್ದ ಅಬ್ದುಲ್ ರಹಿಮಾನ್ ಮೇಲೆ ದುಷ್ಕರ್ಮಿಗಳು ತಲವಾರುಗಳಿಂದ ದಾಳಿ ನಡೆಸಿ ಸ್ಥಳದಲ್ಲೇ ಹತ್ಯೆಗೈದ ಘಟನೆ ಕೂಡ ನಡೆದಿದೆ. ಈ ಪ್ರಕರಣದಲ್ಲಿಯೂ ಭರತ್ ಕುಮ್ಡೇಲು ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಂಟ್ ಹಾಗೂ ಕೋಕಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಭರತ್ ಕುಮ್ಡೇಲು ಶುಕ್ರವಾರ ಕೋರ್ಟ್ಗೆ ಶರಣಾಗಿದ್ದಾನೆ.