ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿಲ್ಲ; ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಸ್ಪಷ್ಟನೆ
ಮಡಿಕೇರಿ: ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿಲ್ಲ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಸ್ಪಷ್ಟಪಡಿಸಿದರು.
ಅಂದು ವಾಹನ ಬದಿಗೆ ಸರಿಸುವ ವಿಚಾರದಲ್ಲಿ ಸುಹೇಲ್ ಹಾಗೂ ಗೌತಮ್ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭ ನನ್ನ ಪುತ್ರ ಸೇರಿದಂತೆ ಇನ್ನಿಬ್ಬರು ಜಗಳವನ್ನು ಬಿಡಿಸಲು ತೆರಳಿದ್ದಾರೆ. ಆದರೆ, ಗೌತಮ್ ಎಂಬ ಯುವಕನಿಗೆ ಹಲ್ಲೆ ಮಾಡಿಲ್ಲ. ನಾಪೋಕ್ಲು ಸುತ್ತಮುತ್ತಲಿನ ಕೆಲವು ವ್ಯಕ್ತಿಗಳು ಧರ್ಮಗಳ ನಡುವೆ ಒಡಕು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ನನ್ನ ಪುತ್ರ ಭಾಗಿಯಾಗಿದ್ದಾನೆ ಎಂದು ಕೆಲವರು ಆರೋಪ ಮಾಡಿದ್ದು, ಆರೋಪ ಮಾಡಿದ ವ್ಯಕ್ತಿಗಳು ಮಕ್ಕಿಶಾಸ್ತಾವು ದೇವಸ್ಥಾನದಲ್ಲಿ ಪ್ರಮಾಣ ಮಾಡಿದರೆ ನನ್ನ ಮಗನಿಗೆ ನಾನೇ ಶಿಕ್ಷೆಕೊಡಿಸಲು ಸಿದ್ಧ ಎಂದು ಸವಾಲು ಎಸೆದಿದ್ದಾರೆ.
ನಾಪೋಕ್ಲು ಜಮಾಅತ್ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ, ನಾಪೋಕ್ಲುವಿನಲ್ಲಿ ಎಲ್ಲರು ಸಮಾನರು ಎಂಬಂತೆ ಸಮಾನತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೆಲವರು ಹಲ್ಲೆ ಪ್ರಕರಣ ಮೂಲಕ ಹಿಂದು ಮುಸ್ಲಿಂ ಎಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಝೀಜ್, ಬದ್ರುದ್ದೀನ್ ಉಪಸ್ಥಿತರಿದ್ದರು.