ಮೈಸೂರು: ಅರಮನೆಯ ಮುಂದೆ ಸಿಲಿಂಡರ್ ಸ್ಫೋಟ ದುರಂತ; ತಂಗಿಯ ಸಾವಿನ ಸುದ್ದಿ ತಿಳಿದು ಅಣ್ಣನೂ ಮೃತ್ಯು
ಮೈಸೂರು: ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಆಕೆಯ ಸಾವಿನ ಸುದ್ದಿ ತಿಳಿದುಕೊಂಡ ಕೆಲವೇ ಹೊತ್ತಿನಲ್ಲಿ ಅಣ್ಣನೂ ಮೃತಪಟ್ಟಿರುವ ಘಟನೆ ನಡೆದಿದೆ.
ನಂಜನಗೂಡು ತಾಲ್ಲೂಕಿನ ಚಾಮಲಾಪುರ ಗ್ರಾಮದ ನಿವಾಸಿ ಮಂಜುಳ ಅವರು ಸ್ಫೋಟದ ವೇಳೆ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ.
ತಂಗಿ ಮಂಜುಳ ಅವರ ನಿಧನದ ಸುದ್ದಿ ತಿಳಿದ ತಕ್ಷಣ, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಅಣ್ಣ ಪರಮೇಶ್ವರ (60) ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ತಂಗಿಯ ಸಾವಿನ ಆಘಾತವೇ ಅಣ್ಣನ ಸಾವಿಗೆ ಕಾರಣ ಎನ್ನಲಾಗಿದೆ.
ಒಂದೇ ಕುಟುಂಬದಲ್ಲಿ ಅಲ್ಪ ಸಮಯದ ಅಂತರದಲ್ಲಿ ಸಂಭವಿಸಿದ ಈ ಎರಡು ಸಾವುಗಳು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ತೀವ್ರ ದುಃಖ ಮತ್ತು ಆಘಾತವನ್ನುಂಟುಮಾಡಿವೆ ಎಂದು ತಿಳಿದು ಬಂದಿದೆ.