ಮೈಸೂರು: ಹುಣಸೂರಿನ ಗೌಡನಕಟ್ಟೆ ಗ್ರಾಮದಲ್ಲಿ ನಾಲ್ಕು ಮರಿ ಹುಲಿಗಳ ಸೆರೆ
ಮೈಸೂರು: ತಾಯಿ ಹುಲಿಯನ್ನು ಬಂಧಿಸಿದ ಮೂರೇ ದಿನಗಳಲ್ಲಿ ಅದರ ನಾಲ್ಕು ಮರಿ ಹುಲಿಗಳನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಸೆರೆ ಹಿಡಿದ ಘಟನೆ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿರುವ ಗೌಡನಕಟ್ಟೆ ಜಮೀನಿನಲ್ಲಿ ಗುರುವಾರ ತಡರಾತ್ರಿ ತಾಯಿ ಹುಲಿಯನ್ನು ಸೆರೆ ಹಿಡಿದ ನಂತರ, ಮರಿಗಳು ಅಲೆದಾಡುತ್ತಿರುವ ಮಾಹಿತಿ ಹಿನ್ನೆಲೆ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.
ಭಾನುವಾರ ಬೆಳಗ್ಗೆ ನಾಲ್ಕೂ ಮರಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹಿಡಿದ ಅಧಿಕಾರಿಗಳು, ಅವುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸ್ಥಳಾಂತರಿಸಲಾಗುವುದಾಗಿ ತಿಳಿಸಿದರು.
ಗೌಡನಕಟ್ಟೆಯಲ್ಲಿ ಜೋಳದ ಹೊಲದಲ್ಲಿ ರಸಗೊಬ್ಬರ ಹಾಕುತ್ತಿದ್ದ ಪ್ರಕಾಶ್ ಮತ್ತು ಸ್ವಾಮಿ ಎಂಬ ಇಬ್ಬರು ರೈತರ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಹುಲಿಯನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕೂಗಿ ಸಹಾಯ ಕೇಳಿದ ರೈತರ ಗದ್ದಲಕ್ಕೆ ಹುಲಿ ಓಡಿ ಹೋಗಿತ್ತು, ನಂತರ ಅರಣ್ಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಅದನ್ನು ಸೆರೆ ಹಿಡಿಯಲಾಗಿತ್ತು.