ನಾಪೋಕ್ಲು: ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ 10ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚೆರಿಯಪರಂಬುವಿನಲ್ಲಿ ಗಣ್ಯರು ಚಾಲನೆ ನೀಡಿದರು.
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಚೆರಿಯ ಪರಂಬುವಿನಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಆಟದ ಮೈದಾನದಲ್ಲಿ ಆಯೋಜಿಸಲಾದ ಪಂದ್ಯಾವಳಿಯನ್ನು ನಾಪೋಕ್ಲುವಿನ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಎ.ಹಾರಿಸ್ ಹಾಗೂ ನಾಪೋಕ್ಲು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ, ಕಾಫಿ ಬೆಳೆಗಾರ ಶಿವಚಾಳಿಯಂಡ ಅಂಬಿ ಕಾರ್ಯಪ್ಪನವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಲಿದೆ. ಅದರಂತೆ ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಇಂತಹ ಕ್ರೀಡಾಕೂಟದಿಂದ ಮಾತ್ರ ಸಾಧ್ಯ. ಕ್ರೀಡಾಪಟುಗಳು ಶಿಸ್ತು ಸಂಯಮವನ್ನು ಪಾಲಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವಂತ್ತಾಗಬೇಕೆಂದು ಹಾರಿಸ್ ಹಾಗೂ ಅಂಬಿಕಾರ್ಯಪ್ಪ ಅವರು ಕ್ರೀಡಾಕೂಟಕ್ಕೆಶುಭ ಹಾರೈಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ನಾಪೋಕ್ಲು ನಾಲ್ಕುನಾಡು ವಿಭಾಗದ ಸರ್ವಧರ್ಮಕ್ಕೆ ಒಳಪಡುವ 156 ಕ್ರೀಡಾಪಟುಗಳನ್ನು ಒಳಗೊಂಡ 12ತಂಡಗಳನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ.
ಈ ಸಂದರ್ಭ ಪಂದ್ಯಾವಳಿಯ ಸ್ಥಾಪರಾದ ಅಬ್ದುಲ್ ಖಾದರ್,ಸಿ.ಎ. ನೌಫಲ್,ಆಯೋಜಕರಾದ ಸಹೀದ್ ಅಲವಿ,ಪಿ. ಆರ್.ಮುನೀರ್,ಎ.ವಿ. ಸತೀಶ್,ಸೇರಿದಂತೆ ಡೆಕ್ಕನ್ ಯೂತ್ ಕ್ಲಬ್ ನ ಪದಾಧಿಕಾರಿಗಳು, ವಿವಿಧ ತಂಡಗಳ ನಾಯಕರುಗಳು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.