ನಾಪೋಕ್ಲು;ಜಾಮೀನು ಪಡೆದು ಹೊರ ಬಂದ ವ್ಯಕ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ; ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ನಿವೇದನೆ
ಮಡಿಕೇರಿ;ಸಾಮಾಜಿಕ ಜಾಲತಾಣ ಪರಿಶೀಲನೆ ವೇಳೆಯಲ್ಲಿ ನಾಪೋಕು ವ್ಯಾಪ್ತಿಯ ಯುವಕನೊಬ್ಬ ರೀಲ್ಸ್, ವೀಡಿಯೋ ಮತ್ತು ಆಡಿಯೋಗಳನ್ನು ಪ್ರಸಾರ ಮಾಡಿ ಪ್ರಚೋನಕಾರಿ ಹೇಳಿಕೆ ನೀಡಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ಆತ ತನ್ನ ಸಾಮಾಜಿಕ ಜಾಲತಾಣ Instagram ಖಾತೆಯ ಮೂಲಕ ಪ್ರಚೋನಕಾರಿ ಬರಹ ಮತ್ತು ವೀಡಿಯೋ ಹಂಚಿಕೊಂಡಿದ್ದು, ಇದನ್ನು ಪರಿಶೀಲಿಸಲಾಗಿ ಇದು ಸಮಾಜದಲ್ಲಿ ಅಶಾಂತಿ, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆಯಾಗುವ ರೀತಿಯ ನಡೆ ಎಂದು ಪರಿಗಣಿಸಿದ್ದು, ಈತನ ಹಿನ್ನೆಲೆಯನ್ನು ಪರಿಶೀಲಿಸಲಾಗಿ ಈತ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿ ಮತ್ತು ಜಾಮೀನು ರದ್ದುಪಡಿಸುವಂತೆ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಜನಾಂಗದ ಮಧ್ಯೆ, ಧರ್ಮಗಳ ನಡುವೆ ಹಿಂಸೆ ಅಥವಾ ಅಶಾಂತಿಯನ್ನು ಪ್ರಚೋದಿಸುವ ಯಾವುದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡುವುದು/ಪೋಸ್ಟ್ ಹಂಚುವುದು ಕಾನೂನುಬಾಹಿರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.