ನಾಪೋಕ್ಲು; ಬೇತು, ಬಲಂಬೇರಿ ಗ್ರಾಮದ ಮುಖ್ಯರಸ್ತೆ ಮಧ್ಯದಲ್ಲೇ ವಾಮಾಚಾರಮಾಡಿದ ಕುರುಹು ಪತ್ತೆ

ನಾಪೋಕ್ಲು; ಬೇತು, ಬಲಂಬೇರಿ ಗ್ರಾಮದ ಮುಖ್ಯರಸ್ತೆ ಮಧ್ಯದಲ್ಲೇ ವಾಮಾಚಾರಮಾಡಿದ ಕುರುಹು ಪತ್ತೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ದಿನನಿತ್ಯ ಸಾರ್ವಜನಿಕರು ನೂರಾರು ವಾಹನಸವಾರರು ಸಂಚರಿಸುವ ರಸ್ತೆ ಮಧ್ಯದಲ್ಲೇ ವಾಮಾಚಾರ ಮಾಡಿದ ಕುರುಹುಗಳು ಪತ್ತೆಯಾಗಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಾಪೋಕ್ಲು ಬೇತು ಗ್ರಾಮದ ಬಲಂಬೇರಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ನಡೆದಿದೆ.

 ನಾಪೋಕ್ಲುವಿನಿಂದ ಬೇತು ಗ್ರಾಮಕ್ಕಾಗಿ ಬಲಂಬೇರಿ, ಪಾರಾಣೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಸೇತುವೆ ಬಳಿಯ ಕೂಡು ರಸ್ತೆಯ ಮಧ್ಯದಲ್ಲೇ ಕಿಡಿಗೇಡಿಗಳು ವಾಮಾಚಾರ ಮಾಡಿದ ಕುರುಹುಗಳನ್ನು ಇಟ್ಟು ತೆರಳಿದ್ದಾರೆ. ಗುರುವಾರ ಮಧ್ಯರಾತ್ರಿ ವಾಮಾಚಾರದ ಕುರುಹುಗಳನ್ನು ಇಟ್ಟು ಕಿಡಿಗೇಡಿಗಳು ತೆರಳಿರಬಹುದು ಎಂದು ಶಂಕಿಸಲಾಗಿದೆ.

 ಶುಕ್ರವಾರ ಬೆಳಗ್ಗೆ ಈ ಮಾರ್ಗವಾಗಿ ವಾಹನ ಸವಾರರೊಬ್ಬರು ತೆರಳುವಾಗ ವಾಮಾಚಾರದ ಕುರುಹುಗಳು ಪತ್ತೆಯಾಗಿ ಮಾಹಿತಿ ನೀಡಿದ್ದಾರೆ. ಇದರಿಂದ ಈ ಭಾಗದ ಮಾರ್ಗವಾಗಿ ತೆರಳುವ ಸಾರ್ವಜನಿಕರು ಹಾಗೂ ವಾಹನ ಸವಾರರು ರಸ್ತೆ ಮಧ್ಯದಲ್ಲೇ ವಾಮಾಚಾರದ ಕುರುಹುಗಳನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಯ,ಹಾಗೂ ಬಲಂಬೇರಿ, ಪಾರಾಣೆ ಗ್ರಾಮಕ್ಕೆ ಸಾರ್ವಜನಿಕರು ತೆರಳುವ ರಸ್ತೆ ಮಧ್ಯದಲ್ಲೇ ವಾಮಾಚಾರ ಮಾಡಿ ಜನರಲ್ಲಿ ಆತಂಕ ಸೃಷ್ಟಿಸುವ ಕೃತ್ಯ ನಡೆಸಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯ ಮಾಚೇಟಿರ ಕುಶು ಕುಶಾಲಪ್ಪ ಒತ್ತಾಯಿಸಿದ್ದಾರೆ. ಮಾಹಿತಿ ತಿಳಿದು ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.