ನಾಪೋಕ್ಲು :ಬಿದ್ದು ಸಿಕ್ಕಿದ ಹಣ ಕಳೆದುಕೊಂಡವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಟೈಲರ್ ಫಾರೂಕ್
ನಾಪೋಕ್ಲು :ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಅಸ್ಸಾಂಮೂಲದ ಟೈಲರ್ ಒಬ್ಬರು ಮಾನವೀಯತೆ ಮೆರೆದಿದ್ದಾರೆ.
ಕಳೆದ ನವಂಬರ್ 15ರಂದು ಮದ್ಯಾಹ್ನ ನಾಪೋಕ್ಲು ಪಟ್ಟಣದ ಶ್ರೀ ರಾಮ ಮಂದಿರದ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಹಣದ ಕಂತೆ ರಸ್ತೆಯ ಮರುಭಾಗದ ಮಳಿಗೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿರುವ ಅಸ್ಸಾಂ ಮೂಲದ ಫಾರೂಕ್ ಅವರಿಗೆ ಸಿಕ್ಕಿದೆ.ಹಣದ ವಾರಸುದಾರರು ಯಾರೆಂದು ತಿಳಿಯದೆ ಫಾರೂಕ್ ಹಣವನ್ನು ತನ್ನಲ್ಲಿಟ್ಟು ನಾಪೋಕ್ಲುವಿನ ಮಾಧ್ಯಮ ವರದಿಗಾರರಾದ ಝಕರಿಯ ಅವರನ್ನು ಸಂಪರ್ಕಿಸಿ ಮಾಹಿತಿ ಹಂಚಿ ಕೊಂಡಿದ್ದಾರೆ.
ಝಕರಿಯ ಅವರು ಹಣ ಬಿದ್ದುಸಿಕ್ಕಿದ್ದು ಸೂಕ್ತ ಮಾಹಿತಿ ನೀಡಿ ಸಂಬಂಧಪಟ್ಟವರು ಫಾರೂಕ್ ಅವರಿಂದ ಪಡೆದುಕೊಳ್ಳುವಂತೆ ಸಾಮಾಜಿಕ ಜಾಲತಾಣದ ವಾಟ್ಸಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ನಾಪೋಕ್ಲುವಿನ ನಿವಾಸಿ ಕೆ.ಎ.ಮನು ಅಯ್ಯಪ್ಪ ಅವರು ನವಂಬರ್ 15ರಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿರುವ ಸಂದರ್ಭ ಹಣ ಕಳೆದುಕೊಂಡಿರುವ ಬಗ್ಗೆ ಸೂಕ್ತ ಮಾಹಿತಿ ನೀಡಿದ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿ ಮೋಹನ್ ಅವರ ಸಮ್ಮುಖದಲ್ಲಿ ಫಾರೂಕ್ ಅವರು ಮನು ಅಯ್ಯಪ್ಪ ಅವರಿಗೆ ಹಣವನ್ನು ಹಸ್ತಾಂತರಿಸಿದರು.
ಕಳೆದು ಹೋದ ಹಣ ಮರಳಿಸಿಗಲು ಕಾರಣಕರ್ತರಾದ ಟೈಲರ್ ಫಾರೂಕ್ ಹಾಗೂ ಮಾಧ್ಯಮ ವರದಿಗಾರ ಝಕರಿಯ ಅವರಿಗೆ ಕೆ.ಎ.ಮನು ಅಯ್ಯಪ್ಪ ಅವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ನಾಪೋಕ್ಲು ಠಾಣೆಯ ಮುಖ್ಯಪೇದೆ ವಿಜಯ್ ಕುಮಾರ್, ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷರು ಹಾಗೂ ಟೈಲರ್ ಮಳಿಗೆಯ ಮಾಲೀಕರಾದ ಎ. ಕೆ.ಚಂದ್ರನ್ ಉಪಸ್ಥಿತರಿದ್ದರು.