ಇನ್ನೂ ಚಿನ್ನ ಬೇಕೆಂದು ಪತಿ ಮನೆಯವರಿಂದ ಕಿರುಕುಳ; ನವವಿವಾಹಿತೆ ಆತ್ಮಹತ್ಯೆ
ಭದ್ರಾವತಿ: ಗಂಡನ ಮನೆಯವರ ನಿರಂತರ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದಲ್ಲಿ ಬೆಳಕಿಗೆ ಬಂದಿದೆ.
ಲತಾ ಎಂಬ 24 ವರ್ಷದ ಯುವತಿ ಭದ್ರಾ ಬಲದಂಡೆ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಪಿಸಿಎಲ್ ನ ಭದ್ರಾ ಅಣೆಕಟ್ಟು ಘಟಕದಲ್ಲಿ ಎಇಇ ಆಗಿರುವ ಗುರುರಾಜ್ ಜೊತೆ ಕೇವಲ ಏಳು ತಿಂಗಳ ಹಿಂದೆ ಲತಾ ವಿವಾಹವಾಗಿದ್ದರು.
ಮಗಳ ಮದುವೆಗೆ 30 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ನಗದು ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು ಎಂದು ಮೃತರ ಪೋಷಕರು ಹೇಳಿದ್ದಾರೆ. ಅದರೂ ಗಂಡನ ಮನೆಯವರು ಇನ್ನಷ್ಟು ಚಿನ್ನಾಭರಣದ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಹೊರಬಿದ್ದಿದೆ.
ಕಿರುಕುಳದಿಂದ ಮನನೊಂದ ಲತಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.