ಅಕ್ಕಮಹಾದೇವಿ ಹಾಗೂ ಬಸವೇಶ್ವರರ ಕುರಿತು ಅಶ್ಲೀಲ ನಿಂದನೆ ಕಿಡಿಗೇಡಿ ವಿರುದ್ದ ಕ್ರಮಕ್ಕೆ ಒತ್ತಾಯ
ಕುಶಾಲನಗರ : ಕರ್ನಾಟಕ ಸಾಂಸ್ಕ್ರತಿಕ ನಾಯಕ, ಹನ್ನೆರಡನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿ ಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹಾಗೂ ಅವಹೇಳನವಾಗಿ ನಿಂದಿಸಿರುವ ರಮಾಕಾಂತ್ ಎಂಬ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಘಟಕಗಳ ಪದಾಧಿಕಾರಿಗಳು ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಬಸವೇಶ್ವರರು ಹಾಗೂ ಅಕ್ಕಮಹಾದೇವಿ ವಿರುದ್ದ ಅವಹೇಳನಕಾರಿ ಸಂದೇಶ ಹಾಕಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಹಾಸಭಾ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಕಿರಣ್ ಗೌರಯ್ಯ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.
ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು, ಸಮಾಜದ ಪ್ರಮುಖರಾದ ಸದಾಶಿವ, ಬಸವಣ್ಣಯ್ಯ, ಮಾದಾಪಟ್ಟಣ ಮೂರ್ತಿ ಇದ್ದರು. ಮಾನ್ಯರೇ, ಹನ್ನೆರಡನೇ ಶತಮಾನದ ಶ್ರೇಷ್ಠ ಶರಣ, ಕಾಯಕ ಹಾಗೂ ದಾಸೋಹದ ಮೂಲಕ ಸನಾಜದಲ್ಲಿ ಸಮಾನತೆಗಾಗಿ ಹೋರಾಡಿದ ಕಾಯಕ ಯೋಗಿ, ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶ್ರೇಷ್ಠ ಶರಣೆ ಅಕ್ಕಮಹಾದೇವಿ ಅವರ ಕುರಿತಾಗಿ ಫೇಸ್ ಬುಕ್ ನಲ್ಲಿ ರಮಾಕಾಂತ್ ಎಂಬ ವ್ಯಕ್ತಿ ಅಶ್ಲೀಲವಾಗಿ ನಿಂದಿಸಿರುವುದರಿಂದ ಕೂಡಲೇ ಈತನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು.
ಬಸವಣ್ಣನವರ ಕುರಿತು ಮಾತನಾಡಲು ಈ ಮನುಷ್ಯನಿಗೆ ಯಾವ ಯೋಗ್ಯತೆ ಇದೆ. ಸಮಾಜದಲ್ಲಿ ಸ್ವಾಸ್ಥ್ಯ ಕದಡುವ ಈ ಕಿಡಿಗೇಡಿಯ ವಿರುದ್ಧ ಕಠಿನ ಕ್ರಮ ಜರುಗಿಸಬೇಕೆಂದು ಕೊಡಗು ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಉಗ್ರವಾಗಿ ಖಂಡಿಸುತ್ತಿದ್ದೇವೆ. ಹಾಗೂ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿದ್ದೇವೆ.