ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆ:ಕೊಡಗಿನ ಶಾಸಕದ್ವಯರ ನಡೆ ಸ್ವಾಗತಾರ್ಹ; ನಕಲಿ ಬಿಲ್ ಪಾವತಿ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ

ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆ:ಕೊಡಗಿನ ಶಾಸಕದ್ವಯರ ನಡೆ ಸ್ವಾಗತಾರ್ಹ;  ನಕಲಿ ಬಿಲ್ ಪಾವತಿ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ

ಮಡಿಕೇರಿ; ಕೊಡಗಿನ ಜ್ವಲಂತ ಸಮಸ್ಯೆಯಾದ ಮಾನವ ಮತ್ತು ವನ್ಯಜೀವಿ ಸಂಘರ್ಷ ಕುರಿತು ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ನಡೆ ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರರಾದ ತೆನ್ನಿರ ಮೈನಾ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ವನ್ಯಜೀವಿ ಧಾಳಿಯಿಂದ ಅನೇಕ ಮಾನವ ಜೀವಹಾನಿ ಹಾಗೂ ಜಾನುವಾರುಗಳ ಜೀವಹಾನಿ ಸಂಭವಿಸುತ್ತಿದ್ದು ಇದನ್ನು ಶಾಶ್ವತವಾಗಿ ತಡೆಗಟ್ಟುವ ಪ್ರಯತ್ನ ಮಾಡುವುದಾಗಿ ಇಬ್ಬರು ಶಾಸಕದ್ವಯರು ಚುನಾವಣೆ ಸಂಧರ್ಭದಲ್ಲಿ ಭರವಸೆ ನೀಡಿದ್ದರು.

ಈ ನಿಟ್ಟಿನಲ್ಲಿ ಸಮಸ್ಯೆಯ ಗಂಭೀರತೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಗುರುವಾರ ಅರಣ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಸುಮಾರು 950 ಕಿ.ಮೀ ನಷ್ಟು ಆನೆ ಕಂದಕಗಳು ಹಾಗೂ ಸೋಲಾರ್ ವಿದ್ಯುತ್ ಬೇಲಿಗಳನ್ನು ದುರಸ್ತಿಪಡಿಸಲು ಹಾಗೂ ಕಾಡಿನ ಒಳಗೆ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಮೇವು ದೊರಕಲು ತಕ್ಷಣವೇ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅರಣ್ಯ ಸಚಿವರು ಸೂಚನೆ ನೀಡಿದ್ದು ಇದರಿಂದ ಬಹುತೇಕ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳು ಖಂಡಿತವಾಗಿ ಇವೆ.

ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಪಾರದರ್ಶಕವಾಗಿ ನಡೆಯಲಿದ್ದು ಶಾಸಕರುಗಳು ಕ್ಷೇತ್ರವ್ಯಾಪ್ತಿಯಲ್ಲಿ ಖುದ್ದಾಗಿ ಪರಿಶೀಲಿಸಲಿದ್ದಾರೆ. 2021-22, ಮತ್ತು 2022-23 ರಲ್ಲಿ ಕೊಡಗು ವನ್ಯಜೀವಿ ವಿಭಾಗದ ಅಧಿಕಾರಿಗಳು ವಿವಿಧ ಲೆಕ್ಕಶೀರ್ಷಿಕೆಯ ಅನುದಾನಗಳನ್ನು ಕಾಮಗಾರಿ ನಡೆಸದೇ ಕೋಟ್ಯಾಂತರ ರೂಗಳ ಬಿಲ್ ಪಾವತಿಯನ್ನು ಚಾಮರಾಜ ನಗರ ಜಿಲ್ಲೆಯ ಗುತ್ತಿಗೆದಾರರೊಬ್ಬರಿಗೆ ಮಾಡಿದ್ದ ವಿವರಗಳು ದಾಖಲೆಗಳ ಸಮೇತ ಬಹಿರಂಗವಾಗಿದ್ದು ಇದಕ್ಕೆ ಸಂಭಂದಿಸಿದಂತೆ ಅಂದಿನ ತಲಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ,( DCF) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,(ACF),ವಲಯ ಅರಣ್ಯಾಧಿಕಾರಿ ( RFO) ಹಿಂದಿನ ಲೋಪವನ್ನು ಗಮನಿಸಿಯೂ ನಕಲಿ ಬಿಲ್ ಗೆ ಸಹಿ ಹಾಕಿದ ಹಾಲಿ ಉಪ ಅರಣ್ಯಸಂರಕ್ಷಣಾಧಿಕಾರಿ( DCF)ಹಾಗೂ ಸಂಭಂದಿಸಿದ ಆಡಳಿತ ವಿಭಾಗದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕ್ಕದಮ್ಮೆ ದಾಖಲಿಸಲಾಗುವುದು ಎಂದು ತೆನ್ನಿರ ಮೈನಾ ತಿಳಿಸಿದ್ದಾರೆ.