ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕನ್ನ: ದೂರು ಕೊಟ್ಟವನೇ ಆರೋಪಿ

ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕನ್ನ: ದೂರು ಕೊಟ್ಟವನೇ ಆರೋಪಿ
Photo credit: Etv bharath

ಚಾಮರಾಜನಗರ, ಡಿ. 24: ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಹಣ ದೋಚಿದ ಪ್ರಕರಣದಲ್ಲಿ, ದೂರು ನೀಡಿದ್ದ ಸಂಘದ ಕಾರ್ಯದರ್ಶಿಯೇ ಆರೋಪಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಸಂಘದ ಕಚೇರಿಯ ಬಾಗಿಲು ಒಡೆದು 14.12 ಲಕ್ಷ ರೂಪಾಯಿ ಕಳವು ಮಾಡಲಾಗಿದೆ ಎಂಬುದಾಗಿ ಕಾರ್ಯದರ್ಶಿ ಚಂದ್ರಶೇಖರ್ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಅಪರಾಧ ತಡೆ ದಳದ ಸಹಕಾರದೊಂದಿಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.

ತನಿಖೆ ವೇಳೆ ಲಭ್ಯವಾದ ಸಾಕ್ಷ್ಯಾಧಾರಗಳು ದೂರುದಾರನ ಮೇಲೆಯೇ ಸಂಶಯವನ್ನು ಗಟ್ಟಿಗೊಳಿಸಿವೆ. ಮುಂದುವರಿದ ವಿಚಾರಣೆಯಲ್ಲಿ ಚಂದ್ರಶೇಖರ್ ಅವರೇ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ 8 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ ಹಣದ ಪತ್ತೆ ಹಾಗೂ ಪ್ರಕರಣದ ಇತರೆ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.