90 ಕೋಟಿ ರೂ. ಸೈಬರ್ ವಂಚನೆ ಬಯಲು; ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ
ಪುದುಚೇರಿ: 90 ಕೋಟಿ ರೂಪಾಯಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲವನ್ನು ಪುದುಚೇರಿ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿದ್ದು, ಈ ಪ್ರಕರಣದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಾಲೇಜಿನೊಳಗೆಯೇ ಕಾರ್ಯನಿರ್ವಹಿಸುತ್ತಿದ್ದ ವಂಚನೆ ಜಾಲವು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರಗಳನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರ ಪ್ರಕಾರ, ಬಂಧಿತ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಸಹಪಾಠಿಗಳ ಬ್ಯಾಂಕ್ ಖಾತೆ ವಿವರಗಳನ್ನು ಸೈಬರ್ ಅಪರಾಧಿಗಳಿಗೆ ಪೂರೈಸುತ್ತಿದ್ದರು. ನಂತರ ವಂಚಕರು ಈ ಖಾತೆಗಳ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ದುಬೈ ಮತ್ತು ಚೀನಾ ನೆಟ್ವರ್ಕ್ಗಳ ನೆರವಿನಿಂದ ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸುತ್ತಿದ್ದರು. ಒಟ್ಟು 90 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ಈ ಜಾಲದ ಮೂಲಕ ನಡೆದಿರುವುದನ್ನು ತನಿಖಾ ತಂಡ ತಿಳಿಸಿದೆ.
ದಿನೇಶ್ ಮತ್ತು ಜಯಪ್ರತಾಪ್ ಎಂಬ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ಇದರ ಬಳಿಕ ದಂಧೆಯ ನಂಟುಗಳು ಪತ್ತೆಯಾಗಲು ಆರಂಭವಾಯಿತು. ತನಿಖೆಯಿಂದ ಇವರಿಬ್ಬರೂ ತಮ್ಮ ಖಾತೆ ವಿವರಗಳನ್ನು ಸ್ನೇಹಿತ ಹರೀಶ್ಗೆ ನೀಡಿದ್ದರೆಂಬುದು ತಿಳಿದುಬಂದಿದೆ. ಹರೀಶ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸುಮಾರು 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಖಾತೆಗಳ ಮೂಲಕ ಕನಿಷ್ಠ 7 ಕೋಟಿ ರೂಪಾಯಿಗಳನ್ನು ವಿತ್ಡ್ರಾ ಮಾಡಿರುವ ದಾಖಲೆಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ವಂಚನೆ ಜಾಲದಲ್ಲಿ ಇನ್ನೂ ಹಲವರ ಪಾಲ್ಗೊಳ್ಳುವಿಕೆ ಇದ್ದಿರಬಹುದೆಂಬ ಶಂಕೆಯ ಪರಿಣಾಮ ತನಿಖೆ ವಿಸ್ತರಿಸಲಾಗಿದೆ.
ಪುದುಚೇರಿಯಲ್ಲಿ ನಡೆದಿರುವ ಈ ಘಟನೆ, ಸೈಬರ್ ಅಪರಾಧ ಜಾಲಗಳು ಶಿಕ್ಷಣ ಸಂಸ್ಥೆಗಳಲ್ಲೂ ಬೇರುಬಿಟ್ಟಿರುವ ಗಂಭೀರ ಬಿಂಬವನ್ನು ಹೊರಹಾಕಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ವಿವರಗಳ ಸುರಕ್ಷತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.